ಬಳ್ಳಾರಿ : ಗಣಿ ಜಿಲ್ಲೆಯ ನೂರಾರು ಕುಟುಂಬದ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ನೀಡುವ ಪ್ರಕ್ರಿಯೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸದ್ದಿಲ್ಲದೇ ಚಾಲನೆ ನೀಡಿದೆ. ಇದೀಗ ಸುಮಾರು 1,536 ವಲಸೆ ಕಾರ್ಮಿಕ ಕುಟುಂಬದ ಮಕ್ಕಳನ್ನ ಮರಳಿ ಶಾಲೆಗೆ ಕರೆತರುವ ಪ್ರಯತ್ನಕ್ಕೆ ಕೈಹಾಕಿ ಯಶಸ್ಸು ಕಂಡಿದೆ.
ಜಿಲ್ಲೆಯ ನಾನಾ ಸರ್ಕಾರಿ ಶಾಲೆಗಳಲ್ಲೀಗ ಅಂದಾಜು 1,536 ಮಂದಿ ವಲಸೆ ಕಾರ್ಮಿಕರು ಪ್ರವೇಶಾತಿ ಪಡೆದಿದ್ದಾರೆ. ಯಾವುದೇ ದಾಖಲಾತಿ ಪರಿಗಣಿಸದೇ ಕೇವಲ ಅವರ ಪೋಷಕರು ನೀಡಿದ ಹೇಳಿಕೆ ಮೇರೆಗೆ ಈ ದಾಖಲಾತಿ ಪ್ರಕ್ರಿಯೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಲಾಕ್ಡೌನ್ ಎಫೆಕ್ಟ್ನಿಂದ ದೊಡ್ಡ ದೊಡ್ಡ ಮಹಾನಗರಗಳಿಗೆ ದುಡಿಯಲು ಹೋಗಿದ್ದ ನೂರಾರು ವಲಸೆ ಕಾರ್ಮಿಕ ಕುಟುಂಬಗಳು ಗಣಿ ಜಿಲ್ಲೆಗೆ ವಾಪಸ್ ಆದ ಹಿನ್ನೆಲೆ ಅವರ ಮಕ್ಕಳನ್ನ ಸರ್ಕಾರಿ ಶಾಲೆಗೆ ಕರೆತರಬೇಕೆಂಬ ಉದ್ದೇಶದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಂತಹ ಸಾಹಸಕ್ಕೆ ಕೈಹಾಕಿದೆ. ವಲಸೆ ಕಾರ್ಮಿಕರ ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತ ಆಗಬಾರದೆಂದು ರಾಜ್ಯ ಸರ್ಕಾರ ಇತ್ತೀಚೆಗೆ ಸೂಕ್ತ ದಾಖಲೆ ಇಲ್ಲದಿದ್ರೂ ಪರವಾಗಿಲ್ಲ.
ಅವರನ್ನ ಮರಳಿ ಸರ್ಕಾರಿ ಶಾಲೆಗೆ ಕರೆತರಬೇಕೆಂಬ ರಾಜ್ಯ ಸರ್ಕಾರದ ದೂರದ ಆಲೋಚನೆಯೂ ಸೇರಿದೆ. ಇಷ್ಟೊಂದು ಪ್ರಮಾಣದ ವಲಸೆ ಕಾರ್ಮಿಕ ಮಕ್ಕಳನ್ನ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡೋ ಪ್ರಯತ್ನಕ್ಕೆ ಮುಂದಾಗಿರೋದು ನಿಜಕ್ಕೂ ಶ್ಲಾಘನೀಯ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಾಮಪ್ಪ, ರಾಜಧಾನಿ ಬೆಂಗಳೂರು ಸೇರಿ ಇನ್ನಿತರೆ ದೊಡ್ಡ ದೊಡ್ಡ ಮಹಾನಗರಗಳಿಗೆ ವಲಸೆ ಹೋಗಿದ್ದ ಕೂಲಿಕಾರ್ಮಿಕರ ಮಕ್ಕಳಿಗೆ ಸೂಕ್ತ ದಾಖಲೆ ಪರಿಗಣಿಸದೇ ಅವರವರ ಪೋಷಕರು ನೀಡಿದ ಹೇಳಿಕೆ ಆಧರಿಸಿ ಪ್ರವೇಶಾತಿ ಕಲ್ಪಿಸಲಾಗಿದೆ.
ವಲಸೆ ಕಾರ್ಮಿಕರ ಮಕ್ಕಳು ಈ ಹಿಂದೆ ಓದಿದ್ದ ಶಾಲೆಯ ಮಾಹಿತಿ ಕೊಟ್ಟರೇ ಸಾಕು. ಅವರಿಂದ ಎಲ್ಲ ಪೂರಕ ದಾಖಲೆಗಳನ್ನ ಶಿಕ್ಷಣ ಇಲಾಖೆ ತರಿಸಿಕೊಳ್ಳುತ್ತೆ. ಅಲ್ಲದೇ, ವಠಾರ ಮತ್ತು ವಿದ್ಯಾಗಮ ಶಾಲೆಗಳು ಗಣಿ ಜಿಲ್ಲೆಯಲ್ಲಿ ನಡೆಯುತ್ತಿವೆ. 8, 9 ಹಾಗೂ 10ನೇ ತರಗತಿಯ ಮಕ್ಕಳಿಗೆ ದೂರದರ್ಶನ ವಾಹಿನಿಯಲ್ಲಿ ಪಾಠ-ಬೋಧನಾ ಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.