ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಮಾರೆಮ್ಮ ದೇವಸ್ಥಾನದ ಬಳಿಯ ಕುಂಬಾರಕುಂಟೆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಬೋನಿನಲ್ಲಿ ಕರಡಿಯೊಂದು ಸೆರೆಯಾಗಿದೆ.
![ಬೋನಿನಲ್ಲಿ ಸೆರೆಯಾದ ಕರಡಿ](https://etvbharatimages.akamaized.net/etvbharat/prod-images/kn-hpt-04-captured-bear-in-bonnie-the-villagers-feel-at-ease-vsl-ka10031_29092020163959_2909f_1601377799_949.jpg)
ಕೆಲ ದಿನಗಳಿಂದ ಕರಡಿ ಉಪಟಳ ಹೆಚ್ಚಾಗಿತ್ತು. ಇದರಿಂದ ಜನರು ಭಯಭೀತರಾಗಿದ್ದರು. ಕೆಲ ವರ್ಷಗಳ ಹಿಂದೆ ದೇವಸ್ಥಾನದ ಪೂಜಾರಿಯ ಮೇಲೆ ಕರಡಿ ದಾಳಿ ನಡೆಸಿ ಕೊಂದಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆವತಿಯಿಂದ ಕರಡಿ ಚಲನವಲನವನ್ನು ಗುರುತಿಸಿ ಬೋನ್ಗಳನ್ನು ಅಳವಡಿಸಲಾಗಿತ್ತು. ಸೆರೆಯಾದ ಕರಡಿಯನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಸದ್ಯ ಸೆರೆ ಸಿಕ್ಕಿರುವ ಕರಡಿಯನ್ನು ಹೊರತುಪಡಿಸಿ ಇನ್ನು ಮೂರು ಅಥವಾ ನಾಲ್ಕು ಕರಡಿಗಳು ಈ ಪ್ರದೇಶದಲ್ಲಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
![ಬೋನಿನಲ್ಲಿ ಸೆರೆಯಾದ ಕರಡಿ](https://etvbharatimages.akamaized.net/etvbharat/prod-images/kn-hpt-04-captured-bear-in-bonnie-the-villagers-feel-at-ease-vsl-ka10031_29092020163959_2909f_1601377799_848.jpg)
ಗುಡ್ಡಗಾಡಿನಂಚಿನಲ್ಲಿ ಇರುವ ಮನೆಗಳ ಪ್ರದೇಶದಲ್ಲಿ ಅರಣ್ಯ ಇಲಾಖೆ ಬ್ಯಾರಿಕೇಡ್ ನಿರ್ಮಿಸಿ, ಕರಡಿಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ತಂತಿ ಬೇಲಿ ಅಳವಡಿಕೆ ಕಾರ್ಯ ಅನುಷ್ಠಾನಗೊಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.