ಬೆಳಗಾವಿ: ಜಿಲ್ಲೆಯಲ್ಲಿ ನಕಲಿ ಮದ್ಯದ ಹಾವಳಿ ಹೆಚ್ಚಾಗಿದ್ದು, ಇದನ್ನು ಕಠಿಣ ಕಾನೂನು ಕ್ರಮದ ಮೂಲಕ ಹತ್ತಿಕ್ಕಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಫಲಾನುಭವಿ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು, ಮದ್ಯಪಾನ ನಿಷೇಧದ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರವೇ ಅಂತಿಮ ಎಂದರು.
ಈಗಾಗಲೇ ಗುಜರಾತ್ ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಯಲ್ಲಿದೆ. ಆದರೆ ಅದು ಯಶಸ್ವಿಯಾಗಿಲ್ಲ. ಮದ್ಯಪಾನ ನಿಷೇಧದಿಂದ ನಕಲಿ ಮದ್ಯದ ಹಾವಳಿ ಹೆಚ್ಚಾಗುವ ಆತಂಕವಿದೆ. ಹೀಗಾಗಿ ಈ ಕುರಿತು ಕಠಿಣ ಕಾನೂನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಮದ್ಯ ನಿಷೇಧ ಮಾಡಬೇಕು ಎಂದು ಈಗಾಗಲೇ ಹಲವಾರು ಮಠಾಧಿಶರು ಮತ್ತು ಜನರು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.
![We will take strict action against selling counterfeit liquor: Ramesh Jarkiholi](https://etvbharatimages.akamaized.net/etvbharat/prod-images/kn-bgm-02-16-ramesh-jarkiholi-function-7201786_16052020151913_1605f_1589622553_48.jpg)
ಮೇ. 17ರ ಬಳಿಕ ಲಾಕ್ಡೌನ್ ಸಡಿಲಿಕೆಯಾಗುವ ಸಂಭವವಿದೆ. ಆದರೂ ಜನ ಸಾಮಾಜಿಕ ಅಂತರ ಕಾಪಾಡಿಕೊಂಡು ಜೀವಿಸುವುದನ್ನು ರೂಢಿಸಿಕೊಳ್ಳಬೇಕು. ಪಂಚಾಯಿತಿ ಚುನಾವಣೆ ನಡೆಸುವುದರ ಬಗ್ಗೆ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.