ಚಿಕ್ಕೋಡಿ (ಬೆಳಗಾವಿ): ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ನೊಂದ ರೈತರಿಗೆ, ಕಾರ್ಮಿಕರಿಗೆ, ವಿವಿಧ ಕ್ಷೇತ್ರದಲ್ಲಿ ತೊಂದರೆ ಅನುಭವಿಸಿದ ಶ್ರಮ ಜೀವಿಗಳಿಗೆ ಸರ್ಕಾರ ಸಹಾಯ ಧನ ಘೋಷಿಸಿದೆ. ಈ ಬಗ್ಗೆ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಹಣ ಪಡೆಯುವಂತೆ ಗ್ರಾಮಗಳಲ್ಲಿ ಡಂಗುರ ಸಾರಲಾಗುವುದು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಾಯ ಧನ ಪಡೆಯಲು ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದೆ. ಇನ್ನುಳಿದ ಫಲಾನುಭವಿಗಳು ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಹಾಗೂ ಸರ್ಕಾರದ 5 ಸಾವಿರ ಪರಿಹಾರ ಧನ ಪಡೆಯುವಂತೆ ಗ್ರಾಮಗಳಲ್ಲಿ ಡಂಗುರ ಸಾರಲಾಗುವುದು ಎಂದರು.
ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಹಾಗೂ ನೇಕಾರರಿಗೆ ಸಮ್ಮಾನ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಸಾರಿಗೆ ಇಲಾಖೆಯಿಂದ ಅಟೋ, ಟ್ಯಾಕ್ಸಿ ಚಾಲಕರಿಗೆ ಸಹಾಯ ಧನ ನೀಡುತ್ತಿದ್ದು, ಅವರು ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಕ್ಷೌರಿಕರು, ಅಗಸರು ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಿಂದ ಸಾಮಾನ್ಯ ಬಡವರಿಗೆ ಸಹಕಾರಿಯಾಗಲಿದೆ ಎಂದರು.