ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದ್ದು, ಹೊರಹರಿವು 85 ಸಾವಿರ ಕ್ಯೂಸೆಕ್ನಿಂದ 10 ಸಾವಿರಕ್ಕೆ ಇಳಿದಿದೆ. ಖಾನಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಕಡಿಮೆಯಾಗಿದ್ದು, ಒಳಹರಿವು 45 ಸಾವಿರ ಕ್ಯೂಸೆಕ್ಗೆ ಇಳಿದಿದೆ. 37.7 ಟಿಎಂಸಿ ಸಾಮರ್ಥ್ಯದ ಡ್ಯಾಮಿನಲ್ಲಿ ಈಗ 35 ಟಿಎಂಸಿ ನೀರು ಸಂಗ್ರಹವಾಗಿದೆ.

ಹೊರಹರಿವು 1 ಲಕ್ಷದವರೆಗೂ ತಲುಪಿದ್ದರಿಂದ ಮುನವಳ್ಳಿ, ಬಸರಗಿ, ಶಿಂಧೋಗಿ, ಅರಟಗಲ್, ತೊರಗಲ್ಲ, ಹಾಲೊಳ್ಳಿ, ಸುನ್ನಾಳ, ತೊರಗಲ್ಲ, ರಾಮದುರ್ಗ ನಗರದ ಭಾಗಶಃ ಪ್ರದೇಶ, ಸುರೇಬಾನ, ಹಂಪಿಹೊಳಿ, ಹಲಗತ್ತಿ, ಕಿಲಬನೂರು ಮುಂತಾದ ಹಳ್ಳಿಗಳು ಜಲಾವೃತ್ತಗೊಂಡಿವೆ.
ಮಲಪ್ರಭಾ ಹೊರಹರಿವು ಕಡಿಮೆಯಾಗಿದ್ದರಿಂದ ಶನಿವಾರ, ಭಾನುವಾರ ಪ್ರವಾಹ ಪ್ರದೇಶದ ನೀರು ಹಿಂದೆ ಸರಿಯುವ ಸಾಧ್ಯತೆ ಇದೆ.
ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಮಹಾರಾಷ್ಟ್ರದ ಪ್ರದೇಶದಿಂದ 97 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು. ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಧೂಪದಾಳ ವೆಯರ್ದಿಂದ 26,500, ಬಳ್ಳಾರಿ ನಾಲಾದಿಂದ 18,000, ಹಿರಣ್ಯಕೇಶಿಯಿಂದ 45 ಸಾವಿರ ಕ್ಯೂಸೆಕ್ ಸೇರಿ ಒಟ್ಟು ಸುಮಾರು ಎರಡು ಲಕ್ಷ ಕ್ಯೂಸೆಕ್ ನೀರು ಬಾಗಲಕೋಟೆಯತ್ತ ಹರಿಯುತ್ತಿದೆ.
ಮಹಾರಾಷ್ಟ್ರದ ಅಂಬೋಲಿ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಹಿಡ್ಕಲ್ ಜಲಾಶಯದಲ್ಲಿ 87 ಸಾವಿರದಿಂದ 97 ಸಾವಿರಕ್ಕೆ ಒಳಹರಿವು ಹೆಚ್ಚಿದೆ. ಮಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದು. ಬೆಳಗಾವಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆಪೀಡಿತವಾಗಿವೆ. ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ, ಗೋಕಾಕ, ರಾಮದುರ್ಗ ತಾಲೂಕುಗಳ ನೂರಾರು ಗ್ರಾಮಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ನಗರ ಮತ್ತು ಹಳ್ಳಿಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.