ಬೆಳಗಾವಿ : ಭಗವಂತ ಕೆಲವರಿಗೆ ಸಕಲ ಐಶ್ವರ್ಯಗಳನ್ನೂ ಕೊಟ್ಟಿರುತ್ತಾನೆ. ಅದ್ರೂ, ಕೆಲವೊಮ್ಮೆ ಅಯ್ಯೋ ಭಗವಂತ, ನಮ್ಮಗ್ಯಾಕೆ ಈ ಕಷ್ಟ ಅಂತ ಮೊರೆಯಿಡುತ್ತಾರೆ. ದೈಹಿಕ ಸಾಮರ್ಥ್ಯ ಇದ್ರೂ ಭಿಕ್ಷೆ ಬೇಡಿ ತಿನ್ನುವ ಜನರು ಸಮಾಜದಲ್ಲಿದ್ದಾರೆ! ಇಂಥವರ ಮಧ್ಯೆ ಈ ಕಲಿರಯ್ಯನ ಕಥೆ ಕೇಳಿ!
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹನಮನಹಟ್ಟಿ ಕಿರಣ್ ಕ್ಯಾಮನಕೂಲ ಎಂಬ ಯುವಕ ಹುಟ್ಟುತ್ತಲೇ ತನ್ನೆರಡೂ ಕೈಗಳನ್ನೂ ಕಳೆದುಕೊಂಡಿದ್ದಾನೆ. ಅಷ್ಟು ಮಾತ್ರ ಸಾಲದೆಂಬಂತೆ, ವಿಧಿ ತಂದೆಯನ್ನೂ ಬಲಿ ಪಡೆದುಕೊಂಡಿತು. ತಾಯಿ ಆಶ್ರಯದಲ್ಲಿ ಬೆಳೆಯುತ್ತಿರುವ ಈ ಬಾಲಕ ಕೈಗಳಿಲ್ಲ, ತಂದೆಯಿಲ್ಲ ಅಂತ ಕೈ ಕಟ್ಟಿ ಕುಳಿತಿಲ್ಲ! ಯಾರಿಗೂ ಹೊರೆಯಾಗಿಲ್ಲ ಅನ್ನೋದೇ ವಿಶೇಷ.
ಈ ಬಾಲಕನ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೆ ಸೃಷ್ಟಿ ಮಾಡಿತ್ತು.ಈ ಬಾಲಕ ಶಾಲೆಯಲ್ಲಿ ಬಿಸಿಯೂಟ ಸೇವಿಸುತ್ತಿರುವ ದೃಶ್ಯವೊಂದನ್ನ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಕೈಗಳಿಲ್ಲದ ಬಾಲಕ ಚಮಚ ಹಿಡಿದು ಆಹಾರ ತಿನ್ನುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಬಾಲಕನ ಛಲಬಲಕ್ಕೆ ಇಂಟರ್ನೆಟ್ನಲ್ಲಿ ಪ್ರಶಂಸೆಯ ಸುರಿಮಳೆ ಬಂದಿತ್ತು.
ಹನಮನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಕಿರಣ್ ಬಡತವನದ ಬೇಗೆಯನ್ನು ಕಂಡುಂಡವ. ಈತನಿಗೆ ಒಂದು ದಿನವೂ ನಾನು ದಿವ್ಯಾಂಗ ಎಂಬ ಯೋಚನೆ ಬಂದಿಲ್ಲವಂತೆ. ಬೆಳಿಗ್ಗೆ ಎದ್ದು ಸ್ವತಃ ನಿತ್ಯ ಕರ್ಮಾದಿಗಳನ್ನು ಮುಗಿಸಿ ಅಮ್ಮನಿಗೆ ಮನೆಗೆಲಸದಲ್ಲಿ ನೆರವಾಗುತ್ತಾನೆ. ಮನೆ ಕಸ ಗುಡಿಸುವುದು, ಕಟ್ಟಿಗೆ ತರುವುದು, ದನಕರುಗಳನ್ನ ಮೇಯಿಸುವುದು ಇತನ ದಿನನಿತ್ಯದ ಕಾಯಕ.
ವಿದ್ಯಾಭ್ಯಾಸದಲ್ಲೂ ಎಲ್ಲರಿಗಿಂತಲೂ ಒಂದು ಕೈ ಮುಂದೆ. ಕೈಗಳಿಲ್ಲದಿದ್ದರೂ ಕಾಲುಗಳಿಂದ ಬರೆಯುವ ಮುದ್ದಾದ ಅಕ್ಷರಗಳನ್ನು ನೋಡಿದ್ರೆ ಸಾಮಾನ್ಯರು ಅಚ್ಚರಿ ಪಡಬೇಕು. ಕಿರಣ ಅಂದ್ರೆ, ಊರಿನ ಜನರಿಗೆ ಬಲು ಅಚ್ಚುಮೆಚ್ಚು. ವಾಸಿಸಲು ಮುರುಕಲು ಮನೆ. ಕೂಲಿ ಕೆಲಸ ಮಾಡುವ ತಾಯಿ, ಜೊತೆಗೆ ಪುಟ್ಟ ತಮ್ಮ, ಮನೆಗೆ ಹಿರಿಯ ಮಗನಾಗಿ ಯಾರಿಗೂ ಹೊರೆಯಾಗದೆ ಜೀವನ ಸಾಗಿಸುತ್ತಿದ್ದಾನೆ ಈ ಪೋರ.
ದಿವ್ಯಾಂಗನಾಗಿದ್ದರೂ ಬದುಕಿ ಸಾಧಿಸುವ ಛಲವಿರುವ ಕಿರಣ್ ಕುಟುಂಬಕ್ಕೆ ಸಹಾಯಹಸ್ತದ ಅವಶ್ಯಕತೆ ತುಂಬಾ ಇದೆ.