ಬೆಳಗಾವಿ : ಬೆಳಗಾವಿ ನಗರದಲ್ಲಿ 24/7 ಕುಡಿಯುವ ನೀರಿನ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ ಆಂಡ್ ಟಿ ಕಂಪನಿಗೆ 21 ಕೋಟಿ ರೂ. ದಂಡ ವಿಧಿಸುವಂತೆ ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಅಭಿವೃದ್ಧಿ ನಿಗಮಕ್ಕೆ(ಕೆಯುಐಡಿಎಫ್ ಸಿ) ನೋಟಿಸ್ ಜಾರಿ ಮಾಡಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದಲ್ಲಿ 24/7 ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಅಭಿವೃದ್ಧಿ ನಿಗಮ(ಕೆಯುಐಡಿಎಫ್ ಸಿ) ಎಲ್ ಆಂಡ್ ಟಿ ಕಂಪನಿಗೆ ಟೆಂಡರ್ ನೀಡಿತ್ತು. ಕಾಮಗಾರಿ ಪೂರ್ಣಗೊಳಿಸಲು ಅವರಿಗೆ ಐದು ವರ್ಷದ ಅವಧಿ ನೀಡಲಾಗಿತ್ತು. 2025ರ ಜೂನ್ 15ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇಲ್ಲಿಯವರೆಗೆ ಶೇ.60ರಷ್ಟು ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ, ಆಗಿದ್ದು ಮಾತ್ರ ಶೇ.35-36ರಷ್ಟು. ಹಾಗಾಗಿ ಕಂಪೆನಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಇನ್ನು, ನಗರದಲ್ಲಿ ಅಲ್ಲಲ್ಲಿ ಅಗೆದಿರುವ ರಸ್ತೆಯನ್ನು ಮೊದಲಿನಂತೆ ಮಾಡುವಂತೆ ಎಲ್ ಆಂಡ್ ಟಿ ಕಂಪನಿಯವರಿಗೆ ನಿರ್ದೇಶನ ನೀಡಿದ್ದೇವೆ. ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆಗೆ ಒಳ್ಳೆಯ ಸಮನ್ವಯತೆಯಿದ್ದು, ಯಾವುದೇ ರೀತಿ ಕೊರತೆ ಇಲ್ಲ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಹುತೇಕ ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಗಿಯಲು ಬಂದಿವೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಬೆಳಗಾವಿಗೆ ಒಂದು ಹೊಸ ರೂಪ ಬಂದಿದೆ. ಇನ್ನು ಸರ್ವೀಸ್ ರಸ್ತೆ, ಕಾಲು ದಾರಿಗಳಲ್ಲಿ ಮಾತ್ರ ಅಗೆಯಲಾಗಿದೆ. ಆದರೆ, ನಡುರಸ್ತೆಯಲ್ಲಿ ಎಲ್ಲೂ ಅಗೆದಿಲ್ಲ ಎಂದು ಆಯುಕ್ತರು ತಿಳಿಸಿದರು.
ಇದನ್ನೂ ಓದಿ : ಬರಗಾಲ ಘೋಷಣೆ: ಕೇಂದ್ರ ಸರ್ಕಾರ ರೈತರನ್ನು ಗೊಂದಲಕ್ಕೀಡು ಮಾಡಿದೆ.. ಕಂದಾಯ ಸಚಿವ ಕೃಷ್ಣಬೈರೇಗೌಡ