ಬೆಳಗಾವಿ: ಗೋಕಾಕ ಕ್ಷೇತ್ರದಲ್ಲಿರುವ ಕಲುಷಿತ ರಾಜಕೀಯ ವ್ಯವಸ್ಥೆ ಹಾಗೂ ಸರ್ವಾಧಿಕಾರಿ ಧೋರಣೆ ವಿರುದ್ಧ ಕಳೆದ ಎರಡೂವರೆ ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಅದೂ ಮುಂದುವರೆಯಲಿದೆ ಎಂದು ಗೋಕಾಕ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ ಅನರ್ಹ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ತೊಡೆತಟ್ಟಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ನಲ್ಲಿ ಹಣ- ತೋಳ್ಬಲದ ರಾಜಕೀಯ ವ್ಯವಸ್ಥೆ ತಾಂಡವವಾಡುತ್ತಿದೆ. ಅದಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಜೆಡಿಎಸ್ ನಲ್ಲಿದ್ದ ನನ್ನನ್ನು ಬಿಜೆಪಿಗೆ ಕರೆತಂದು ಇಲ್ಲಿಂದ ಟಿಕೆಟ್ ಕೊಡಿಸಿದ್ದರು. ಆದರೆ, ಚುನಾವಣೆಯಲ್ಲಿ ಸೋತಿದ್ದು ನನ್ನ ವೈಫಲ್ಯ. ರಾಜಕೀಯ ಸಮೀಕರಣದಿಂದ ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆ ಆಗುವ ಸಾಧ್ಯತೆ ಇದೆ. ಅವರು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿದರೆ, ನಮ್ಮ ಬೆಂಬಲ ಇದೆ. ಅದರ ಬದಲು ಮತ್ತೆ ಕಲುಷಿತ ರಾಜಕಾರಣ ಮುಂದುವರೆಸಿದ್ರೆ ನಾವು ಸಹಿಸಲ್ಲ ಎಂದು ಗುಡುಗಿದರು.
ಗೋಕಾಕಿನ ಕಲುಷಿತ ವಾತಾವರಣದ ವ್ಯವಸ್ಥೆ ವಿರುದ್ಧ ಹೋರಾಡಲು ಅವಕಾಶ ಇದೆ ಎಂಬ ಕಾರಣಕ್ಕೆ ಬಿಜೆಪಿ ಸೇರಿದ್ದೆ. ಕ್ಷೇತ್ರದ ಮತದಾರರು ಈ ವ್ಯವಸ್ಥೆ ವಿರುದ್ಧ ಹೋರಾಟ ಮುಂದುವರೆಸೋಣ ಎಂದರೆ ಜನರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ. ನನ್ನ ಬೆಂಬಲಿಗರು, ಮುಖಂಡರು ಬಿಜೆಪಿಯಲ್ಲೇ ಇರೋಣ ಅಂದ್ರೆ ಇರ್ತಿನಿ. ಬೇಡ ಅಂದ್ರೆ ಪರ್ಯಾಯ ಚಿಂತನೆ ಮಾಡುತ್ತೇವೆ. ಕಲುಷಿತ ವಾತಾವರಣ ವಿರುದ್ಧ ಹೋರಾಟ ಮಾಡೋಣ ಎಂದು ಕ್ಷೇತ್ರದ ಜನರು ನಿರ್ಧರಿಸಿದರೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಎಲ್ಲ ಅಧಿಕಾರ ನಮ್ಮ ಕೈಯಲ್ಲಿ ಇರಬೇಕು. ಗೋಕಾಕ್ ತಾಲೂಕಿನ ರಾಜಕೀಯ ಆಡಳಿತ ವ್ಯವಸ್ಥೆ ಹೀಗೆಯೇ ಇರಬೇಕು ಎಂಬ ಮನೋಭಾವನೆ ಇಟ್ಟುಕೊಂಡು ರಮೇಶ ಜಾರಕಿಹೊಳಿ ಬಿಜೆಪಿಗೆ ಬಂದರೆ, ನಾವು ಅವರ ಜೊತೆ ಕೂಡುವುದಿಲ್ಲ ಎಂದು ಗುಡುಗಿದ್ದಾರೆ.