ಅಥಣಿ: ನೆರೆ ವಿಷಯದಲ್ಲಿ ಜಿಲ್ಲಾಡಳಿತದ ತಾರತಮ್ಯ ನಿವಾರಣೆ, ಪುನರ್ವಸತಿ, ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಉಪವಾಸ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಈ ಹಿನ್ನೆಲೆಯಲ್ಲಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ಅವರು ಪ್ರತಿಭಟನಕಾರರಿಗೆ ನೀರು ಕುಡಿಸುವ ಮುಖಾಂತರ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.
ಹಿಪ್ಪರಗಿ ಅಣೆಕಟ್ಟೆಯ ಹಿನ್ನೀರಿನಿಂದ ಬಾಧಿತವಾಗಿರುವ ಗ್ರಾಮಗಳ ನೂರಾರು ಮನೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ, ಜಿಲ್ಲೆಯ ಅಥಣಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಗಳು ಸರ್ವೆ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡುತ್ತಿದ್ದು, ಇದರಿಂದಾಗಿ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ. ನೆರೆ ಸಂತ್ರಸ್ತರಿಗೆ ಮಾಡ್ತಿರುವ ತಾರತಮ್ಯ ವಿರೋಧಿಸಿ ಹೋರಾಟಗಾರರು ನಡೆಸುತ್ತಿರುವ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿತು.
ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಬರುವವರಿಗೆ ನಾವು ಉಪವಾಸ ಸತ್ಯಾಗ್ರಹ ಮುಂದೂಡುತ್ತೇವೆ. ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಭೇಟಿ ನೀಡಿದರು. ಸಮಾಧಾನದಿಂದ ನೆರೆ ಸಂತ್ರಸ್ತರ ಗೋಳನ್ನು ಆಲಿಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರ ಹಲವು ಬೇಡಿಕೆ ನನ್ನ ಗಮನಕ್ಕೆ ಬಂದಿದೆ. ಸರ್ಕಾರದ ಮುಖ್ಯ ಉದ್ದೇಶ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ಕೊಡಬೇಕು, ಯಾರು ನಿರ್ಣಾಯಕರಾಗಿ ಉಳಿಯಬಾರದು ಎಂಬುದೇ ಆಗಿದೆ ಎಂದರು.
ಸರ್ಕಾರ ಎಲ್ಲಾ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದೆ. ಆದಷ್ಟು ಬೇಗ ಪರಿಹಾರ ನೀಡುತ್ತೇವೆ. ₹10,000 ತುರ್ತು ಹಣ ಕೆಲವರಿಗೆ ದೊರೆತಿಲ್ಲ. ಬ್ಯಾಂಕ್ ಖಾತೆಗಳ ಸರಿಯಾದ ದಾಖಲಾತಿ ಇಲ್ಲದೆ ಸಮಸ್ಯೆಯಾಗಿದೆ. ಎರಡು ದಿನಗಳಲ್ಲಿ ₹10,000 ಎಲ್ಲರಿಗೂ ಸಂಪೂರ್ಣವಾಗಿ ನೀಡುತ್ತೇವೆ. ಮನೆಗಳ ಸರ್ವೆ ಮಾಡುವಾಗ ಎ,ಬಿ,ಸಿ ವರ್ಗ ಏನೋ ಲೋಪದೋಷವಾಗಿದೆ. ಅದನ್ನು ಕೂಡ ಈ ವಾರದಲ್ಲಿ ಸಂಪೂರ್ಣವಾಗಿ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಬೆಳೆ ಪರಿಹಾರ: ನೆರೆಯಿಂದ ಏನು ಬೆಳೆ ಹಾಳಾಗಿದೆ. ಇನ್ನೂ ಮೂರು ದಿನಗಳಲ್ಲಿ ತಂತ್ರಾಂಶದಲ್ಲಿ ದಾಖಲೆ ಕಾರ್ಯ ಮುಗಿಯುತ್ತೆ. ಜಿಲ್ಲೆಯಲ್ಲಿ 4 ಕೋಟಿ ರೂಪಾಯಿ ಜಮಾ ಆಗಿದೆ. ಇಂದು 3000 ರೈತರ ಖಾತೆಗೆ ಹಣ ಸಂದಾಯ ಮಾಡಿದ್ದೇವೆ. ಇನ್ನು, 7 ದಿನಗಳಲ್ಲಿ ಎಲ್ಲ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಸಂದಾಯವಾಗುತ್ತದೆ ಎಂದು ಭರವಸೆ ನೀಡಿದರು.