ಬೆಳಗಾವಿ: ಗಡಿ ವಿಷಯದಲ್ಲಿ ಪದೇ ಪದೆ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ನಗರದ ಪಾಲಿಕೆ ಮುಂದಿನ ಧ್ವಜ ತೆರವು ಮಾಡುವಂತೆ ಒತ್ತಾಯಿಸಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳುವುದಾಗಿ ಹೇಳಿಕೊಂಡಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ಮುಂದಿರುವ ಧ್ವಜ ಸೇರಿದಂತೆ ನಗರದಲ್ಲಿ ಹಾಗೂ ಜಿಲ್ಲೆಯ ಗಡಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಪಾಲಿಕೆ ಎದುರು ಬ್ಯಾರಿಕೇಡ್ ಹಾಕಿ ವಾಹನಗಳ ಒಳಪ್ರವೇಶ ನಿಷೇಧಿಸಲಾಗಿದೆ. ನಗರದ ಚೆನ್ನಮ್ಮ ಸರ್ಕಲ್, ಮಹಾನಗರ ಪಾಲಿಕೆ ಕಚೇರಿ, ಸರ್ದಾರ್ ಗ್ರೌಂಡ್, ಸಾಂಭಾಜಿ ವೃತ್ತ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ನಗರದ ಪ್ರಮುಖ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.
ಇನ್ನು ನಗರದ ಪಾಲಿಕೆ ಕಚೇರಿಗೆ ಮುಂಭಾಗಿಲಿನಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳಿಗೆ ಒಳಪ್ರವೇಶ ನಿಷೇಧಿಸಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಇನ್ನು ನಿನ್ನೆ ಕಾನೂನು ಮತ್ತು ಸುವ್ಯವಸ್ಥೆ ಉಪಪೊಲೀಸ್ ಆಯುಕ್ತ ಡಾ. ವಿಕ್ರಮ ಆಮ್ಟೆ ಅವರು ರ್ಯಾಲಿಗೆ ಅನುಮತಿ ನೀಡಿಲ್ಲ. ಪ್ರತಿಭಟನೆ ಹೆಸರಿನಲ್ಲಿ ಏನಾದರೂ ಕಿರಿಕ್ ಮಾಡಿದ್ರೆ ಪರಿಸ್ಥಿತಿ ನೆಟ್ಟಗಿರೊಲ್ಲ ಎಂಬ ಸಂದೇಶವನ್ನು ಎಂಇಎಸ್ ಮುಖಂಡರಿಗೆ ರವಾನಿಸಿದ್ದರು. ಇದಲ್ಲದೇ ನಿನ್ನೆ ಕೂಡ ಎಂಇಎಸ್ ಮುಖಂಡರೊಂದಿಗೆ ಸಭೆ ನಡೆಸಿ ಪ್ರತಿಭಟನೆ ಹೆಸರಿನಲ್ಲಿ ಏನಾದರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಅದಕ್ಕೆ ಒಪ್ಪಿಗೆ ನೀಡಿದ್ದ ಎಂಇಎಸ್ ಪ್ರತಿಭಟನೆ ಹಿಂಪಡೆದಿದ್ದಾಗಿ ಹೇಳಿಕೆ ನೀಡಿದ್ದರು.
ಆದರೂ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಉದ್ದೇಶದಿಂದ ಬೆಳಗಾವಿ ನಗರದ ಮಹಾನಗರ ಪಾಲಿಕೆ ಮುಂದೆ ಕನ್ನಡಪರ ಹೋರಾಟಗಾರರು ಅಳವಡಿಸಿದ ಕನ್ನಡ ಧ್ವಜ ಸೇರಿದಂತೆ ನಗರದ ಪ್ರಮುಖ ವೃತ್ತಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.