ಬೆಳಗಾವಿ: ಲಾಕ್ಡೌನ್ ಹಿನ್ನೆಲೆ ಪೊಲೀಸರು ಹಗಲು ರಾತ್ರಿ ಎನ್ನದೆ ದೇಶ ಸೇವೆ ಮಾಡುತ್ತಿದ್ದಾರೆ. ಹಾಗಾಗಿ ಸಂಕೇಶ್ವರ ಪೊಲೀಸ್ ಠಾಣೆಯ ಪೊಲೀಸರಿಗೆ ನಿಡಸೋಸಿ ಸಿದ್ದ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಊಟದ ವ್ಯವಸ್ಥೆ ಮಾಡಿದರು.
ಪ್ರತಿದಿನದ ಊಟಕ್ಕೂ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಶ್ರೀಗಳು ಪೊಲೀಸ್ ಸಿಬ್ಬಂದಿಗೆ ಸ್ವತಃ ತಾವೇ ಪ್ರಸಾದ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪರಮ ಪೂಜ್ಯರು, ದೇಶಕ್ಕೆ ಮತ್ತು ದೇಶದ ಜನತೆಗೆ ಈ ತರಹದ ತೊಂದರೆಗಳು ಉಂಟಾದ ಸಂದರ್ಭದಲ್ಲಿ ಮಠಮಾನ್ಯಗಳು, ಸಂಘ-ಸಂಸ್ಥೆಗಳು ದೇಶದ ಮತ್ತು ತುಂಬಾ ತೊಂದರೆಯಲ್ಲಿರುವ ಜನತೆಯ ಸಹಕಾರಕ್ಕೆ ಮುಂದೆ ಬರಬೇಕೆಂದು ಕರೆ ನೀಡಿದರು.
ಜೊತೆಗೆ ಆದಷ್ಟು ಬೇಗ ಈ ದೇಶದಿಂದ ಅಷ್ಟೇ ಅಲ್ಲದೇ ಜಗತ್ತಿನಿಂದಲೇ ಕೊರೊನಾ ವೈರಸ್ ನಿರ್ಮೂಲನೆಯಾಗಿ ಎಲ್ಲರೂ ನಿರ್ಭೀತರಾಗಿ ಸಂತೋಷದಿಂದ ಇರುವಂತೆ ಆಗಲಿ ಎಂದು ದೇವರಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ ಗಣಪತಿ ಕೊಗನೊಳ್ಳಿ, ಭೀಮಪ್ಪಾ ನಾಗನೂರೆ, ರಾಜಾಪೂರೆ, ಸಂಜು ಪಾಟೀಲ ಹಾಗೂ ಶ್ರೀಮಠದ ಸಾಧಕರು ಉಪಸ್ಥಿತರಿದ್ದರು.