ಬೆಳಗಾವಿ : ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಶಹಾಪುರದ ಅಲ್ವಾನ್ ಗಲ್ಲಿಯಲ್ಲಿ ನಡೆದಿದೆ. ಜ್ಯೋತಿ ಲಕ್ಷ್ಮಿಕಾಂತ್ ಯಲ್ಲಾರಿ(19) ಮೃತ ದುರ್ದೈವಿ.

ಬೆಳಗಾವಿಯ ಬಸವನಗಲ್ಲಿಯ ನಿವಾಸಿಯಾಗಿರುವ ಲಕ್ಷ್ಮಿಕಾಂತ ಹಾಗೂ ಜ್ಯೋತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಅಂತರ್ಜಾತಿ ಆದರೂ ಕುಟುಂಬದ ವಿರೋಧದ ಮಧ್ಯೆ 3 ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆ ಆಗಿದ್ದರು. ಮದುವೆ ನಂತರ ಜ್ಯೋತಿಗೆ ಪತಿ ಲಕ್ಷ್ಮಿಕಾಂತ ಹಾಗೂ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ನನ್ನ ಮಗಳನ್ನು ಪತಿ ಸೇರಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಯುವತಿ ಪೋಷಕರು ಆರೋಪಿಸುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ನಿವಾಸಿ ಜ್ಯೋತಿ ಹಾಗೂ ಬಸವನಗಲ್ಲಿಯ ಲಕ್ಷ್ಮಿಕಾಂತ ಮದುವೆ ನಂತರ ಶಹಾಪುರ ಅಲ್ವಾನ್ ಗಲ್ಲಿಯ ಮನೆಯಲ್ಲಿ ವಾಸವಾಗಿದ್ದರು. ಲಕ್ಷ್ಮಿಕಾಂತ ಹಾಗೂ ಆತನ ಪೋಷಕರು ನಿತ್ಯ ಜಾತಿ ನಿಂದನೆ ಹಾಗೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆ ಬಳಿಕ ಪತಿ ಲಕ್ಷ್ಮಿಕಾಂತ ಪರಾರಿಯಾಗಿದ್ದಾರೆ. ಲಕ್ಷ್ಮಿಕಾಂತ ಹಾಗೂ ಆತನ ಪೋಷಕರು ಸೇರಿ ನಾಲ್ವರನ್ನು ಬಂಧಿಸಬೇಕು ಎಂದು ಜ್ಯೋತಿ ಪೋಷಕರು ಪಟ್ಟುಹಿಡಿದ್ದಾರೆ. ಸ್ಥಳಕ್ಕೆ ಶಹಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.