ಬೆಳಗಾವಿ: ಬಸವಣ್ಣವರನ್ನು ಕೇವಲ ನಮ್ಮ ಮನೆಗೆ ಮಾತ್ರ ಸೀಮಿತ ಮಾಡಿಕೊಂಡಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೆಂಡ್ನಲ್ಲಿ ಬಸವೇಶ್ವರ ಪುತ್ಥಳಿ ಉದ್ಘಾಟಿಸುವ ಮೂಲಕ ಜಗತ್ತಿಗೆ ಅವರ ತತ್ವ ಮತ್ತು ಆದರ್ಶಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.
ಬಸವೇಶ್ವರ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣ ಓರ್ವ ಮಹಾನ್ ಮಾನವತಾವಾದಿ. ಸಮಾಜದಲ್ಲಿದ್ದ ಅನಿಷ್ಟಗಳನ್ನು ನಿರ್ನಾಮ ಮಾಡಲು ಶ್ರಮಿಸಿದವರು. ಇಂತಹ ಮಹಾನ್ ವ್ಯಕ್ತಿಯ ತತ್ವಗಳು ಎಲ್ಲರಿಗೂ ಮುಟ್ಟಬೇಕು ಎಂದು ಆಶಿಸಿದರು.
ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತವಲ್ಲ. ಅಖಂಡ ಮಾನವ ಕುಲವನ್ನು ಉದ್ಧರಿಸಲು ಜನ್ಮತಾಳಿದ್ದ ವ್ಯಕ್ತಿ ಅವರು. ನಮ್ಮಲ್ಲಿ ಬಡತನ ಇನ್ನೂ ಬಹಳಷ್ಟಿದೆ. ಬಡತನದಿಂದ ಜನರು ಬೇರೆ ಧರ್ಮಕ್ಕೆ ಸೇರುವಂತಹ ಸ್ಥಿತಿ ನಮ್ಮ ಕಣ್ಮುಂದಿದೆ. ಇದು ಬದಲಾಗಬೇಕು. ಎಲ್ಲರೂ ಉತ್ತಮ ಜೀವನ ನಡೆಸುವಂತಾಗಬೇಕು ಎಂದು ಕೋರೆ ತಿಳಿಸಿದರು.