ಚಿಕ್ಕೋಡಿ: ಈಗಾಗಲೇ ಟೆಕ್ನಾಲಜಿ ತುಂಬಾ ಬೆಳದಿದೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಅವರ ತಲೆ ಇವರಿಗೆ, ಇವರ ತಲೆ ಅವರಿಗೆ ಜೋಡಿಸುವಂತಹ ತಂತ್ರಜ್ಞಾನಗಳು ಬಂದಿವೆ. ರಮೇಶ ಜಾರಕಿಹೊಳಿ ವಿಷಯದಲ್ಲಿ ಏನೇನು ಮಾಡಿದ್ದಾರೆ ಗೊತ್ತಿಲ್ಲ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಲೋಕೂರು, ಮಂಗಸೂಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.
ರಮೇಶ ಜಾರಕಿಹೊಳಿ ಅವರ ಜೊತೆ ನಾವು ಕೆಲಸ ಮಾಡಿದ್ದೇವೆ. ಅವರು ಒಳ್ಳೆಯ ವ್ಯಕ್ತಿ. ಇದೇನು ಆಗಿದೆ ಎಂದು ನನಗೂ ಗೊತ್ತಿಲ್ಲ. ಇದರ ಷಡ್ಯಂತ್ರ ಬೇರೇನೆ ಇದೆ. ಬೇರೆ ಬೇರೆ ರೀತಿಯಲ್ಲಿ ತನಿಖೆ ಮಾಡಿ. ಒಬ್ಬರ ಹೆಸರ ಹಾಳು ಮಾಡುವುದು ಸರಿಯಲ್ಲ ಎಂದರು.
ಬೆಳಗಾವಿ ಉಸ್ತುವಾರಿ ಸಚಿವಾಕಾಂಕ್ಷಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಉಸ್ತುವಾರಿ ಆಕಾಂಕ್ಷಿ ಅಲ್ಲ. ಹೈಕಮಾಂಡ್ ಏನು ನಿರ್ಣಯ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ದರಾಗಿದ್ದೇವೆ. ಒಂದು ವೇಳೆ ಉಸ್ತುವಾರಿ ನೀಡಿದರೆ ಸ್ವೀಕಾರ ಮಾಡುತ್ತೇನೆ. ಅದು ಒಂದು ಜವಾಬ್ದಾರಿ ಕೆಲಸ ಎಂದರು.
ಜವಳಿ ಹಾಗೂ ಅಲ್ಪಸಂಖ್ಯಾತ ಖಾತೆ ಬಗ್ಗೆ ಪ್ರತಿಕ್ರಿಯಿಸಿ, ಮೊನ್ನೆ ಬಜೆಟ್ ಪೂರ್ವಭಾವಿ ಸಭೆ ಆಗಿದೆ. ಸಿಎಂ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.