ಬೆಳಗಾವಿ: ಯೋಜನಾ ನಿರಾಶ್ರಿತರಿಗೆ ಮಾತ್ರ ಶಾಶ್ವತ ಪರಿಹಾರ ನೀಡಲು ಅವಕಾಶವಿದ್ದು ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಪ್ರವಾಹಪೀಡಿತ ನೆರೆಸಂತ್ರಸ್ತರಿಗೆ ಪರಿಹಾರ ನೀಡಲು ಅವಕಾಶವಿದ್ದು ಈಗಾಗಲೇ ಸಂತ್ರಸ್ತರಿಗೆ ಪರಿಹಾರ ಒದಗಿಸಲಾಗಿದೆ. ಆದರೆ, ಯೋಜನಾ ನಿರಾಶ್ರಿತರಿಗೆ ಮಾತ್ರ ಶಾಶ್ವತ ಪರಿಹಾರ ಒದಗಿಸಲು ಅವಕಾಶವಿದೆ. ನಮ್ಮ ಭಾಗದ ಹಿಡಕಲ್ ಜಲಾಶಯ ನಿರಾಶ್ರಿತರಿಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದರು.
ಪ್ರವಾಹ ಉಂಟಾಗಲು ಜನರು ನದಿಯನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದರಿಂದ ನೆರೆ ಸಂತ್ರಸ್ತರಿಗೆ ಸಮಸ್ಯೆ ಆಗುತ್ತಿದೆ. ನದಿತೀರದ ಹತ್ತಿರ ಹೋಗಿ ಯಾರೂ ಮನೆ ಕಟ್ಟಿಕೊಳ್ಳಬಾರದು. ಎತ್ತರದ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಳ್ಳಬೇಕು ಎಂದು ಕಾರಜೋಳ ಮನವಿ ಮಾಡಿದ್ದಾರೆ.
ಮಲಪ್ರಭಾ ನದಿಯ ಹೂಳೆತ್ತುವ ವಿಚಾರ:
ಮಲಪ್ರಭಾ ನದಿಯ ಹೂಳು ಎತ್ತುವ ಕುರಿತಂತೆ ಈಗಾಗಲೇ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ನದಿ ಸರ್ವೇ ಕಾರ್ಯ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಸರ್ವೆ ಕಾರ್ಯ ಪೂರ್ಣಗೊಂಡಿಲ್ಲ. ಸರ್ವೇ ಕಾರ್ಯ ಮುಗಿದು ವರದಿ ಕೈಸೇರುತ್ತಿದ್ದಂತೆ ಮಲಪ್ರಭಾ ನದಿಯ ಹೂಳು ಎತ್ತುವ ಕಾರ್ಯವನ್ನು ಪ್ರಾರಂಭ ಮಾಡುತ್ತೇವೆ.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ದೆಹಲಿ ಪ್ರಯಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅಂತಾರಾಜ್ಯ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಕೆಲ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶ, ಕರ್ನಾಟಕ ನಾಲ್ಕು ರಾಜ್ಯದಲ್ಲಿ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ 2013ರಲ್ಲಿ ತೀರ್ಪು ಕೊಟ್ಟಿದ್ದಾರೆ. ನ್ಯಾಯಾಧೀಕರಣದ ತೀರ್ಪಿನಲ್ಲಿ ಕೃಷ್ಣದಲ್ಲಿ 130 ಟಿಎಂಸಿ ನೀರನ್ನು ಕರ್ನಾಟಕ ರಾಜ್ಯಕ್ಕೆ ಹಂಚಿಕೆ ಮಾಡಿದ್ದಾರೆ. ಅದರಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಬೇರೆ ಬೇರೆ ರೀತಿಯಲ್ಲಿ ಹಂಚಿಕೆ ಮಾಡಿದ್ದಾರೆ.
ಇದಾದ ನಂತರ 2015ರಲ್ಲಿ ತೆಲಂಗಾಣ ಮತ್ತು ಆಂಧ್ರ ಪುನರ್ ವಿಂಗಡಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತೆಲಂಗಾಣ ಹೊಸ ರಾಜ್ಯವಾಗಿ ವಿಂಗಡಣೆ ಆಯ್ತು. ಆಗ ಎರಡು ರಾಜ್ಯಗಳು ನೀರು ಹಂಚಿಕೆ ಸರಿ ಆಗಿಲ್ಲ ಅಂತಾ ಸುಪ್ರೀಂಕೋರ್ಟ್ ಹೋಗಿದ್ದು ರಾಜ್ಯ ವಿಂಗಡಣೆ ಆಗಿರುವ ಸಂದರ್ಭದಲ್ಲಿ ಎರಡು ರಾಜ್ಯಗಳು ಕುಳಿತು ತಾವೇ ನೀರನ್ನು ಹಂಚಿಕೆ ಮಾಡಿಕೊಳ್ಳಬೇಕಿತ್ತು. ಆದ್ರೆ, ಅವರು ಅದನ್ನು ಮಾಡದೇ ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಇದರಿಂದ ನಾವು ಕೂಡ ಕೋರ್ಟ್ ಹೋಗಿದ್ದೇವೆ.
ಮೂರು ರಾಜ್ಯಗಳ ವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್ ತೆಲಂಗಾಣ ಮತ್ತು ಆಂಧ್ರದ ಆಂತರಿಕ ವಿಚಾರವಾಗಿದ್ದು ಪುನರ್ ವಿಂಗಡಣೆ ಆಧಾರದ ಮೇಲೆ ನೀವೇ ಬಗೆಹರಿಸಿಕೊಳ್ಳುತೆ ತೆಲಂಗಾಣ ಮತ್ತು ಆಂಧ್ರಕ್ಕೆ ಕೋರ್ಟ್ ಸೂಚನೆ ನೀಡಿದೆ. ಆದ್ರೆ, ಫೈನಲ್ ತೀರ್ಪು ಇನ್ನೂ ಕೊಟ್ಟಿಲ್ಲ. ಇತ್ತ ಪ್ರಕರಣ ಕೋರ್ಟ್ನಲ್ಲಿ ಇರೋದ್ರಿಂದ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಸೇರಿದಂತೆ ಭೇಟಿ ಮಾಡಿ ಅವರ ಜೊತೆಗೂ ಸಭೆ ಮಾಡಲಾಗಿದೆ. ಆದಷ್ಟು ಬೇಗ ನ್ಯಾಯಾಧಿಕರಣದಿಂದ ನ್ಯಾಯ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮಹದಾಯಿ ವಿಚಾರದ ಬಗ್ಗೆ ಮಾತನಾಡಿ, ಮಹದಾಯಿ ವಿಚಾರದಲ್ಲಿ 13 ಟಿಎಂಸಿ ನೀರಿನ ಪೈಕಿ ವಿದ್ಯುತ್ ಉತ್ಪಾದನೆಗೆ 8.4ಟಿಎಂಸಿ ಹಾಗೂ 5.4ಟಿಎಂಸಿ ಕುಡಿಯುವ ನೀರಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಅದನ್ನು ಡಿಪಿಆರ್ ಸಮಸ್ಯೆ ಬಗೆಹರಿಸಿಕೊಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ಕೇಂದ್ರ ಸರ್ಕಾರ ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು ಆದಷ್ಟು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.
ಮಹದಾಯಿಯಲ್ಲಿ ನೀರು ಹಂಚಿಕೆ ವಿಚಾರದಲ್ಲಿ ನಮಗೆ ಗೆಜೆಟ್ ಆಗಿದೆ. ಕೃಷ್ಣ ನೀರಿನ ವಿಚಾರದಲ್ಲಿ ಗೆಜೆಟ್ ಆಗಿಲ್ಲ. ಗೆಜೆಟ್ ನೋಟಿಫಿಕೇಶನ್ ಆಗಬೇಕು ಅಂತಾ ಕರ್ನಾಟಕ-ಮಹಾರಾಷ್ಟ್ರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.