ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೊನಾ ಬಂದಿದೆ ಎಂದು ಬೆಳಗಾವಿಯಲ್ಲಿ ಸಚಿವ ಭೈರತಿ ಬಸವರಾಜ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಖಂಡಿತಾ ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರುತ್ತಾರೆ. ಅವರಿಗೆ ಕೊರೊನಾ ಬಂದಿದೆ ಎಂಬ ಮಾತುಗಳಿವೆ. ಕೊರೊನಾ ಇರುವುದರಿಂದ ಅದರಿಂದ ಗುಣಮುಖರಾಗಿ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.
ಕೇವಲ ಚುನಾವಣಾ ಪ್ರಚಾರ ಕುರಿತು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ಮಾಡಿದ್ದೇನೆ. ರಮೇಶ್, ಬಾಲಚಂದ್ರ ಜೊತೆ ನಿನ್ನೆ ಫೋನ್ನಲ್ಲಿ ಮಾತನಾಡಿದ್ದೇನೆ. ಇಂದು ನಾನು, ನಮ್ಮೆಲ್ಲಾ ನಾಯಕರು ಗೋಕಾಕ, ಅರಭಾವಿಗೆ ಹೋಗ್ತಿದೀವಿ. ಸಿಎಂ ಸೂಚನೆಯಂತೆ ಬೆಳಗಾವಿ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ ಎಂದರು.
ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಜಯಭೇರಿ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಜಯಸಾಧಿಸುವಲ್ಲಿ ಸಂದೇಹ ಇಲ್ಲ. ಸುರೇಶ್ ಅಂಗಡಿ ಜನಪರ ಕಾರ್ಯಕ್ರಮ ಮುಂದಿಟ್ಟು ಮತಯಾಚನೆ ಮಾಡುತ್ತೇವೆ. ಪಿಎಂ ನರೇಂದ್ರ ಮೋದಿ ಜನಪರ ಕಾರ್ಯಗಳನ್ನು ಮುಂದಿಟ್ಟು ಮತ ಕೇಳ್ತೇವೆ. ಬೆಳಗಾವಿ ನಗರ ಅಭಿವೃದ್ಧಿಗೆ ಇತ್ತೀಚೆಗೆ 150 ಕೋಟಿ ರೂ. ಕೊಟ್ಟಿದ್ದೇವೆ. ಬೆಳಗಾವಿ ಜನತೆ ಅತಿ ಹೆಚ್ಚಿನ ಮತ ನೀಡಿ ಮಂಗಳಾ ಅಂಗಡಿ ಅವರನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಿದ್ದರಾಮಯ್ಯ ಆಗ್ರಹ ವಿಚಾರ: ಸಿದ್ದರಾಮಯ್ಯ ತಮ್ಮ ಪಕ್ಷದಲ್ಲಿ ಏನಾಗಿದೆ ಅದನ್ನು ನೋಡಿಕೊಳ್ಳಲಿ. ಕೋವಿಡ್ ಸಂದರ್ಭದಲ್ಲಿ ಸಿಎಂ ಬಿಎಸ್ವೈ ಅನೇಕ ಜನಪರ ಯೋಜನೆ ಕೊಟ್ಟಿದ್ದಾರೆ. ಇನ್ನೆರಡು ದಿನ ಬೆಳಗಾವಿಯಲ್ಲಿ ಇದ್ದು ಪ್ರಚಾರ ಮಾಡಿ ಮಸ್ಕಿ, ಬಸವಕಲ್ಯಾಣಕ್ಕೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಸಿಎಂ ರಾಜೀನಾಮೆ ನೀಡಲಿ ಇಲ್ಲ, ಈಶ್ವರಪ್ಪ ವಜಾ ಮಾಡಲಿ ಎಂಬ ಡಿಕೆಶಿ ಆಗ್ರಹ ವಿಚಾರ: ಇದು ನಮ್ಮ ಆಂತರಿಕ ವಿಷಯ ಇದಕ್ಕೂ ಅವರಿಗೆ ಸಂಬಂಧ ಇಲ್ಲ. ನಾಳೆ ಬೆಳಗ್ಗೆಯೇ ಸಿಎಂ ಆಗುವ ಕನಸಿನಲ್ಲಿ ಅವರಿದ್ದಾರೆ. ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಎಸ್ಐಟಿ ಮುಂದೆ ಇಂದು ವಿಚಾರಣೆಗೆ ಹಾಜರಾಗ್ತಾರಾ ರಮೇಶ್ ಜಾರಕಿಹೊಳಿ?