ಬೆಳಗಾವಿ: ಅಧಿಕಾರಿಗಳ ಬೇಜವಾಬ್ದಾರಿಯೋ ಅಥವಾ ಸರ್ಕಾರದ ನಿರ್ಲಕ್ಷ್ಯವೋ ಇದಕ್ಕೆ ಬಲಿಯಾಗುತ್ತಿರುವುದು ಮಾತ್ರ ವಲಸೆ ಕಾರ್ಮಿಕರು. ಸರ್ಕಾರದ ಉಚಿತ ಬಸ್ ವ್ಯವಸ್ಥೆಯಲ್ಲಿ ಬೆಂಗಳೂರಿನಲ್ಲಿದ್ದ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಹೀಗೆ ಬೇರೆ ರಾಜ್ಯಗಳ ಸುಮಾರು 50 ವಲಸೆ ಕಾರ್ಮಿಕರನ್ನು ಕರೆದುಕೊಂಡು ಬೆಳಗಾವಿಯಲ್ಲಿ ಬಿಡಲಾಗಿದೆ.
ಕೇಂದ್ರ ಗೃಹ ಇಲಾಖೆ ಆದೇಶದಂತೆ ರಾಜ್ಯ ಸರ್ಕಾರ ಕಲ್ಪಿಸಿದ ಉಚಿತ ಬಸ್ ವ್ಯವಸ್ಥೆಯಿಂದ ಕಾರ್ಮಿಕರು ಮತ್ತಷ್ಟು ಅತಂತ್ರರಾಗಿದ್ದಾರೆ. ಇವರನ್ನು ಬಸ್ ಹತ್ತುವಾಗ ಯಾರೂ ಕೇಳಿಲ್ಲ, ಇವರು ಕೂಡಾ ಹೇಳಿಲ್ಲ. ಹೀಗಾಗಿ ಅವರೆಲ್ಲ ರಾತ್ರಿ ಬೆಂಗಳೂರಿಂದ ಪ್ರಯಾಣಿಸಿ ಬೆಳಗ್ಗೆ ಬೆಳಗಾವಿಗೆ ಬಂದಿಳಿದಿದ್ದಾರೆ. ಇವರನ್ನು ಕ್ವಾರಂಟೈನ್ ಮಾಡಲು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಸರ್ಕಾರ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಸದ್ಯ ಹಾಲಭಾವಿ ಮೋರಾರ್ಜಿ ದೇಸಾಯಿ ಶಾಲಾ ಆವರಣದಲ್ಲಿ ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ.
ದಿನಸಿ ವಿತರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್: ಬೆಳಗಾವಿಗೆ ಬಂದ ಅಂತಾರಾಜ್ಯಗಳ ಕಾರ್ಮಿಕರನ್ನು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿಯಾಗಿ ಧೈರ್ಯ ತುಂಬಿದರು. ಇದಲ್ಲದೇ ಅವರಿಗೆಲ್ಲ ಆಹಾರದ ಪೊಟ್ಟಣ ಹಾಗೂ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
ಅವರಿಗೆ ಬೇಕಾಗುವ ರೊಟ್ಟಿ- ಸಬ್ಜಿ ಮುಂತಾದ ಆಹಾರ ಪದಾರ್ಥಗಳನ್ನು ಒದಗಿಸಲಾಗಿದೆ. ಜಿಲ್ಲಾಡಳಿತದಿಂದ ಅವರ ಊರುಗಳಿಗೆ ತಲುಪಿಸಲು ಮುಂದಿರುವ ಮಾರ್ಗಗಳ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಮಹಾನಗರ ಪಾಲಿಕೆ ಉಪ ಆಯುಕ್ತ ಎಸ್. ಬಿ. ದೊಡ್ಡಗೌಡರ ಮತ್ತು ಸಿಬ್ಬಂದಿ ಈ ವೇಳೆ ಇದ್ದರು.