ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವಿನ ಕುರಿತು ಎಂಇಎಸ್, ಕಾಂಗ್ರೆಸ್ ಸೇರಿ ಇತರ ಪರಾಜಿತ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಪಾಲಿಕೆ ಚುನಾವಣೆ ಫಲಿತಾಂಶ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿರುವ ಪರಾಜಿತರು, ಫಲಿತಾಂಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ನಿರ್ಣಯ ಕೈಗೊಂಡಿದ್ದಾರೆ. ಇವಿಎಂ ಜೊತೆ ವಿವಿಪ್ಯಾಟ್ ಬಳಸದೇ ಕಾನೂನುಬಾಹಿರವಾಗಿ ಚುನಾವಣಾ ಪ್ರಕ್ರಿಯೆ ನಡೆಸಲಾಗಿದೆ. ನಾಡದ್ರೋಹಿ ಎಂಇಎಸ್ ಜತೆಗೆ ಕಾಂಗ್ರೆಸ್, ಆಪ್, ಪಕ್ಷೇತರ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿದ್ದಾರೆ.
ಬೆಳಗಾವಿಯ ಮರಾಠಾ ಮಂದಿರದಲ್ಲಿ ಸಭೆ ನಡೆಸಿರುವ ಪರಾಜಿತ ಅಭ್ಯರ್ಥಿಗಳು, ಆಗಸ್ಟ್ 31ರಂದೇ ಇವಿಎಂ ಜೊತೆ ವಿವಿಪ್ಯಾಟ್ ಇರದ ಬಗ್ಗೆ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೂ ನಮ್ಮ ಮನವಿಗೆ ಚುನಾವಣೆ ಅಧಿಕಾರಿಗಳು ಸ್ಪಂದಿಸಿಲ್ಲ. ಎಂಇಎಸ್, ಕಾಂಗ್ರೆಸ್, ಆಪ್, ಪಕ್ಷೇತರ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಚುನಾವಣೆ ಪಾರದರ್ಶಕವಾಗಲು ಮರು ಚುನಾವಣೆ ನಡೆಸುವಂತೆ ಒತ್ತಾಯಿಸಿ 80ಕ್ಕೂ ಹೆಚ್ಚು ಪರಾಜಿತ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಲು ನಿರ್ಣಯ ಕೈಗೊಂಡಿದ್ದಾರೆ. ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ನಡೆದಿತ್ತು.
ಪಾಲಿಕೆಯ 58 ವಾರ್ಡ್ಗಳಲ್ಲಿ ಶೇ.50.41ರಷ್ಟು ಮತದಾನವಾಗಿತ್ತು. ಸೆಪ್ಟೆಂಬರ್ 6ರಂದು ಮಹಾನಗರ ಪಾಲಿಕೆ ಫಲಿತಾಂಶ ಹೊರ ಬಂದಿತ್ತು. ಬಿಜೆಪಿ 35, ಕಾಂಗ್ರೆಸ್ 10, ಪಕ್ಷೇತರ 10, ಎಂಇಎಸ್ 2, ಎಐಎಂಐಎಂ ಒಂದು ವಾರ್ಡ್ನಲ್ಲಿ ಜಯ ಸಾಧಿಸಿತ್ತು. ಇದೇ ಮೊದಲ ಬಾರಿ ಪಕ್ಷದ ಚಿಹ್ನೆ ಮೇಲೆ ರಾಜಕೀಯ ಪಕ್ಷಗಳು ಸ್ಪರ್ಧೆಗಿಳಿದಿದ್ದವು.
ಓದಿ: ಹುಬ್ಬಳ್ಳಿ - ಧಾರವಾಡ ಉಪಮೇಯರ್ ಸ್ಥಾನ.. ಎಸ್ಸಿ ಮಹಿಳೆ ಸ್ಥಾನ ಗೆಲ್ಲದೇ ಇಕ್ಕಟ್ಟಿನಲ್ಲಿ ಕಮಲ ಪಡೆ