ಅಥಣಿ (ಬೆಳಗಾವಿ): ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕೊರೊನಾ ಭೀತಿ ನಡುವೆಯೂ ಜೈನಧರ್ಮದ 24 ನೇ ಹಾಗೂ ಕೊನೆಯ ತೀರ್ಥಂಕರರಾದ ಭಗವಾನ್ ವರ್ಧಮಾನ್ ಮಹಾವೀರರ 2619 ನೇ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಜೈನ ಬಾಂಧವರ ಪವಿತ್ರ ದಿನವಾದ ಭಗವಾನ್ ಮಹಾವೀರ ಜಯಂತಿ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತಿತ್ತು. ಆದರೆ ಈ ಬಾರಿ ಸರ್ಕಾರದ ಆದೇಶದಂತೆ ಮತ್ತು ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ತಾಲೂಕಿನಲ್ಲಿ ಅತಿ ಸರಳವಾಗಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಅಥಣಿ ತಾಲೂಕಿನಲ್ಲಿ ಜೈನಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿಇದ್ದಾರೆ. ಮಹಾವೀರರ ಮೂರ್ತಿಯನ್ನು ಕೃಷ್ಣಾ ನದಿ ತೀರದಲ್ಲಿ ಪಂಚಾಮೃತ ಅಭಿಷೇಕ ನೆರವೇರಿಸಿ, ಪೂಜಾ ಕೈಂಕರ್ಯಗಳನ್ನು ಮಾಡುವ ಮೂಲಕ ಜಯಂತಿ ಕಾರ್ಯಕ್ರಮವನ್ನು ನೆರವೇರಿಸಲಾಯ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಾಗದ ಹಲವರು ಮನೆಯಲ್ಲಿ ಭಗವಾನರ ಪೋಟೋ ಇಟ್ಟು ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜೈನ ಸಮೂದಾಯದಿಂದ ಗ್ರಾಮದ ಜನರಿಗೆ ಉಚಿತವಾಗಿ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಣೆ ಮಾಡಲಾಯ್ತು.