ಚಿಕ್ಕೋಡಿ: ಸರ್ಕಾರ ರಚನೆಯಾಗಲು ಕಾಂಗ್ರೆಸ್ನಿಂದ ನಮ್ಮ ಪಕ್ಷಕ್ಕೆ ಬಂದು ಮತ್ತೆ ಚುನಾವಣೆ ಎದುರಿಸಿ ಗೆದ್ದವರಿಗೆ ನ್ಯಾಯ ಕೊಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಳತಗಾ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನೇಕ ಶಾಸಕರಿಗೆ ಅಸಮಾಧಾನ ಇದ್ದರೂ ಕೂಡ ನಮ್ಮ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ನಾಯಕರು ಅವರೆಲ್ಲರನ್ನು ಸಮಾಧಾನ ಮಾಡಿ, ಯೋಗ್ಯ ಸಮಯ ಬಂದಾಗ ಯೋಗ್ಯ ಅವಕಾಶ ಒದಗಿಸುತ್ತಾರೆ ಎಂದರು.
ಸಿಡಿ ಬಹಿರಂಗ ಪಡಿಸುವುದಾಗಿ ಹೇಳಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಮೊದಲಿನಿಂದಲೂ ಈ ರೀತಿಯ ಹೇಳಿಕೆಗಳನ್ನೇ ಕೊಡ್ತಾ ಇದ್ದಾರೆ. ಅವರು ಯಾವಾಗ ಬಹಿರಂಗಪಡಿಸುತ್ತಾರೋ ಅದಕ್ಕೆಲ್ಲರೂ ತಯಾರಿದ್ದಾರೆ. ಮೊದಲು ಬಹಿರಂಗಪಡಿಸಲಿ, ಅದರಲ್ಲಿ ತಪ್ಪುಗಳಿದ್ದರೆ ನಮ್ಮ ನಾಯಕರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ವರಿಷ್ಠರಿಗೆ ದೂರು ನೀಡಲು ಹೊರಟ ರೇಣುಕಾಚಾರ್ಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದುಃಖ ಆದಾಗ ಹಿರಿಯರ ಬಳಿ ದುಃಖ ತೋಡಿಕೊಳ್ಳಬೇಕಾಗುತ್ತೆ, ಹೀಗಾಗಿ, ದಿಲ್ಲಿಗೆ ಹೋಗಿದ್ದಾರೆ. ಅವರು ಅಲ್ಲಿ ಏನು ದೂರು ನೀಡ್ತಾರೋ ನನಗೆ ಗೊತ್ತಿಲ್ಲ ಎಂದರು.
ನಮ್ಮ ಮುಖ್ಯಮಂತ್ರಿ ನುಡಿದಂತೆ ನಡೆಯುವ ನಾಯಕರು. ಯಾರಿಗೂ ಅನ್ಯಾಯ ಮಾಡಲು ಅವರು ಪ್ರಯತ್ನ ಪಟ್ಟಿಲ್ಲ. ಎಲ್ಲರನ್ನು ನಿಭಾಯಿಸಿಕೊಂಡು ಹೋಗುವ ಪರಿಸ್ಥಿತಿ ಇರುತ್ತದೆ. ಅಸಮಾಧಾನಗೊಂಡವರಿಗೆ ಸಮಾಧಾನ ಮಾಡುವ ಪ್ರಯತ್ನವನ್ನ ಮುಖ್ಯಮಂತ್ರಿ ಮಾಡುತ್ತಾರೆ ಎಂದು ತಿಳಿಸಿದರು.
ಓದಿ: ಯತ್ನಾಳ ಧೈರ್ಯ ಮೆಚ್ಚುವಂತಹದ್ದು: ಎಸ್.ಆರ್.ಪಾಟೀಲ್ ಶಹಬ್ಬಾಸ್ಗಿರಿ