ಗೋಕಾಕ: ನಮ್ಮ ಅಭ್ಯರ್ಥಿ ಅಶೋಕ್ ಪೂಜಾರಿ ಗೆಲುವಿನ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ, ಇಲ್ಲಿರುವ ಸಾಹುಕಾರಿಕೆ ದೌಲತ್ತನ್ನು ತೊಲಗಿಸಬೇಕೆಂಬುದು ಎಲ್ಲರ ಭಾವನೆಯಾಗಿದೆ. ದೇವರೇ ಕಲ್ಪಿಸಿರುವಂತಹ ಚುನಾವಣೆ ಇದಾಗಿದ್ದು, ದೇವರ ತೀರ್ಮಾನದಂತೆ ಚುನಾವಣೆ ನಡೆಯುತ್ತಿದೆ. ಹೀಗಾಗಿ ಅಶೋಕ್ ಪೂಜಾರಿ ಗೆಲುವು ಶತಸಿದ್ಧ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಗೆದ್ದ ಬಳಿಕ ಅಶೋಕ್ ಪೂಜಾರಿ ಸಚಿವರಾಗಿ ಬರ್ತಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಮತ್ತೆ ಮಧ್ಯಂತರ ಚುನಾವಣೆ ಆಗಬಾರದು ಅಂತಾ ಮೊದಲೇ ಹೇಳಿದ್ದೇನೆ. ಈಗ ಮತ್ತೆ ಮಧ್ಯಂತರ ಚುನಾವಣೆ ಬಂದ್ರೆ ಅದರಿಂದಾಗುವ ಸಮಸ್ಯೆ, ಜನರ ಕಷ್ಟ ನೋಡೋರು ಯಾರೂ ಇರಲ್ಲ. ಮತ್ತೆ ಆರು ತಿಂಗಳು ಜನರು ಕಷ್ಟದಲ್ಲಿರಬೇಕಾಗುತ್ತೆ. ಡಿ.9ರಂದು ಫಲಿತಾಂಶ ಏನಾಗುತ್ತೆ ನೋಡೋಣ. ಕಷ್ಟದಲ್ಲಿರೋ ಜನರ ಬದುಕು ಕಟ್ಟಿಕೊಳ್ಳಲು ಹೊಸ ಸರ್ಕಾರ ಅವಶ್ಯಕತೆ ಇದೆ. ಯಾವ ರೀತಿ ಆಗಬೇಕು ಅಂತಾ ಫಲಿತಾಂಶ ಬಳಿಕ ನೋಡೋಣ ಎಂದರು.
ಇನ್ನು, ಇಬ್ಬರು ಅನರ್ಹ ಶಾಸಕರು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ಇಬ್ಬರಲ್ಲ ಒಂಬತ್ತು ಅನರ್ಹ ಶಾಸಕರು ಇದ್ದಾರೆ ಎಂದರು. ತಾವೇನಾದರೂ ಹೆಸರು ಬಿಡುಗಡೆ ಮಾಡ್ತೀರಾ ಎಂಬ ಪ್ರಶ್ನೆಗೆ, ನಾನು ಆ ಮಟ್ಟಕ್ಕೆ ಇಳಿಯಲ್ಲ. ಅಂತಹ ರಾಜಕಾರಣ ಮಾಡಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ಟಿಪ್ಪು ಜಯಂತಿಗೆ ಹೋಗಿರಲಿಲ್ಲ ಎಂಬ ಸಿದ್ದು ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಇಲ್ಲಿ ಈ ಕಾಂಟ್ರವರ್ಸಿ ಏತಕ್ಕೆ, ಇಲ್ಲಿ ಹಲವಾರು ಸಮಸ್ಯೆ ಇದೆ. ನಮ್ಮ ಸಮಾಜದಲ್ಲಿ ಜಯಂತಿ ಮಾಡೋ ಕಲ್ಚರ್ ಇಲ್ಲ ಅಂತಾ ಸಿ.ಎಂ.ಇಬ್ರಾಹಿಂ ಅವರೇ ಹೇಳಿದ್ದಾರೆ. ಚುನಾವಣೆಯಲ್ಲಿ ಮತ ಪಡೆಯಲು ಗೊಂದಲ ಸೃಷ್ಟಿ ಮಾಡಲು ಅವರು ಹೇಳಿರಬಹುದು. ಆ ಗೊಂದಲಗಳಲ್ಲಿ ನಾನು ಭಾಗವಹಿಸಲು ಸಿದ್ಧವಿಲ್ಲ. ಕಷ್ಟದಲ್ಲಿರುವ ಜನರೇ ನಮ್ಮ ದೇವರು, ಅವರೇ ಟಿಪ್ಪು ಸುಲ್ತಾನರು. ಅವರ ಬದುಕು ಕಟ್ಟಿಕೊಟ್ಟರೆ ಟಿಪ್ಪುವಿಗೆ ಗೌರವ ಕೊಟ್ಟಂಗೆ ಎಂಬುದು ನನ್ನ ಅಭಿಪ್ರಾಯವಾಗಿದೆ.
ಮೈಸೂರು ಭಾಗದ ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿರುವ ಅರವಿಂದ ಲಿಂಬಾವಳಿ ಹೇಳಿಕೆ ವಿಚಾರ ಎಲ್ಲಾ ಶಾಸಕರು ಎಲ್ಲರ ಜೊತೆಯೂ ಸಂಪರ್ಕದಲ್ಲಿರುತ್ತಾರೆ. ಸದ್ಯ ಅರವಿಂದ ಲಿಂಬಾವಳಿ ನನ್ನ ಸಂಪರ್ಕದಲ್ಲಿದ್ದಾರೆ ಅಂತ ಹೇಳಿದ್ದಾರಲ್ಲ. ಬೇರೆ ತರಹ ಸಂಪರ್ಕ ಇಲ್ಲದೇ ಇದ್ದರೇ ಸಾಕು ಅಷ್ಟೇ ಎಂದು ಅರವಿಂದ ಲಿಂಬಾವಳಿ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.