ಚಿಕ್ಕೋಡಿ: ಮೂರನಾಲ್ಕು ತಿಂಗಳಿಂದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ಕಬ್ಬು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಅತಿ ಹೆಚ್ಚು ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯ ರೈತರು ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಪ್ರತಿ ವರ್ಷ ಸುಮಾರು 40 ಸಾವಿರ ಹೆಕ್ಟೇರ್ಗಿಂತ ಹೆಚ್ವು ಕಬ್ಬನ್ನು ಬೆಳಯಲಾಗುತ್ತದೆ.
ಇಲ್ಲಿನ ರೈತರು ನದಿ ನೀರನ್ನು ಅವಲಂಬಿಸಿದ್ದು, ಸುಮಾರು ಶೇ. 75ರಷ್ಟು ಕಬ್ಬು ಒಣಗಿ ನಿಂತಿದೆ. ನದಿ ದಡದ ಮೇಲಿನ ಗ್ರಾಮಗಳಲ್ಲಿ ಅಷ್ಟೇ ಅಲ್ಲದೇ ಏತ ನೀರಾವರಿ ಯೋಜನೆ ಮೂಲಕ ರೈತರು ಸ್ವಯಂ ಪೈಪ್ ಲೈನ್ ಮೂಲಕ ಸುಮಾರು 50 ಕಿ.ಮೀ.ಗಿಂತ ದೂರದಲ್ಲಿ ಪೈಪ್ ಲೈನ್ ಮಾಡಿ, ಅನೇಕರು ಸಾಲ ಮಾಡಿ ಕಬ್ಬು ಬೆಳೆದಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಸಾಲ ಹೇಗೆ ತೀರಿಸುವುದು ಹಾಗೂ ಜೀವನ ಹೇಗೆ ಸಾಗಿಸುವುದು ಎಂಬ ಪ್ರಶ್ನೆ ರೈತರಿಗೆ ಎದುರಾಗಿದೆ. ಕಳೆದ ಬಾರಿ ಸಾಗಿಸಿದ ಕಬ್ಬಿಗೆ ಕಾರ್ಖಾನೆಗಳು ಬಾಕಿ ಬಿಲ್ ಉಳಿಸಿಕೊಂಡಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಥಣಿ ತಾಲೂಕು ಒಂದರಲ್ಲಿ 5 ಕಾರ್ಖಾನೆಗಳು ಇವೆ. ಚಿಕ್ಕೋಡಿ ತಾಲೂಕು ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿನ ಸಕ್ಕರೆ ಕಾರ್ಖಾನೆ ಸೇರಿ ಮಹಾರಾಷ್ಟ್ರದ ಕೆಲ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲಾಗುತ್ತಿತ್ತು. ಕಬ್ಬು ಒಣಗಿದ್ದರಿಂದ ಮುಂದಿನ ಹಂಗಾಮಿನಲ್ಲಿ ಕಾರ್ಖಾನೆಗಳಿಗೆ ಕಬ್ಬಿನ ಕೊರತೆ ಎದುರಾಗಲಿದೆ.
ಕಡಿಮೆ ಬೆಲೆಗೆ ಮೇವು ಮಾರಾಟ: ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಮೇವನ್ನು ಮಾರಾಟ ಮಾಡಲಾಗುತ್ತಿದ್ದು, ಟನ್ಗೆ ₹1,600ರಿಂದ 1,800 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಅದೇ ಈ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡಿದರೆ ₹2,800ರಿಂದ 3,000 ರೂ.ವರೆಗೆ ಮಾರಾಟ ಮಾಡಬಹುದು. ನೀರಿಲ್ಲದೆ ಕಬ್ಬು ಒಣಗಿರೋದರಿಂದ ಅಥಣಿ ಭಾಗದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಈಗ ಅದೇ ಜಮೀನಿನಲ್ಲಿ ಮೆಕ್ಕಜೋಳ, ಸೆಣಬು, ತೊಗರಿ ಹೀಗೆ ಇನ್ನಿತರ ಮೂರು ತಿಂಗಳ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.