ಬೆಳಗಾವಿ: ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆಂದು ಸಿಎಂ ಬಿ.ಎಸ್.ಯಡಿಯೂರಪ್ಪನವರು ಹಲವು ಬಾರಿ ಹೇಳಿದ್ದಾರೆ. ಅದರಂತೆ ಸೋತಿರುವ ಮೂವರನ್ನು ಈಗಾಗಲೇ ಎಂಎಲ್ಸಿಗಳನ್ನಾಗಿ ಮಾಡಿದ್ದಾರೆ. ಮುಂದೆ ಅವರನ್ನು ಖಂಡಿತವಾಗಿಯೂ ಸಚಿವರನ್ನಾಗಿ ಮಾಡ್ತಾರೆ ಎಂದು ತಮ್ಮ ಮಿತ್ರರಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದರು.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಬಂದು ಸೋತಿರುವ ಮೂವರಿಗೆ ಎಂಎಲ್ಸಿ ಸ್ಥಾನ ನೀಡಲಾಗಿದೆ. ಕೊಟ್ಟ ಮಾತಿನಂತೆ ಸಿಎಂ, ಪಕ್ಷ ನಡೆದುಕೊಳ್ಳುತ್ತೆ ಎಂಬ ಭರವಸೆ ಇದೆ. ರಾಜಕೀಯ ಮಾತು ನಡೆಸುವ ಪ್ರವೃತ್ತಿ ಇಟ್ಟುಕೊಂಡಿದ್ದರೆ ಅದು ಬಿಜೆಪಿ ಮಾತ್ರ. ವಿಶ್ವನಾಥರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಈಗಲೇ ಏಕೆ ಮಾತನಾಡೋದು, ಕಾದು ನೋಡಿ ಎಂದು ಸಚಿವ ಕೆ.ಸುಧಾಕರ್ ಹೇಳಿದರು.
ರಮೇಶ್ ಜಾರಕಿಹೊಳಿ, ಬಿ.ಎಲ್.ಸಂತೋಷ್ ಭೇಟಿ ವಿಚಾರದ ಕುರಿತು ಹೇಳಿದ ಅವರು, ರಮೇಶ್ ಜಾರಕಿಹೊಳಿ ಬಿ.ಎಲ್.ಸಂತೋಷ್ ಭೇಟಿಯಾಗೋದು ಅಪರಾಧಾನಾ?.. ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗೋದು ಅಪರೂಪ ಏನಲ್ವಲ್ಲ. ಅವರು ಆವಾಗಾವಾಗ ದೆಹಲಿಗೆ ಹೋಗ್ತಾನೇ ಇರ್ತಾರೆ. ನೀರಾವರಿ ಇಲಾಖೆ ಕಡತಗಳು, ಕೋರ್ಟ್ ವಿಚಾರಗಳು ಇರುತ್ತವೆ ಹೀಗಾಗಿ ಹೋಗ್ತಾರೆ. ಬಿ.ಎಲ್.ಸಂತೋಷ್ಜೀ ನಮ್ಮ ಪಕ್ಷದ ದೊಡ್ಡ ಮಟ್ಟದ ನಾಯಕರು. ಹೀಗಾಗಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಮಟ್ಟದ ನಾಯಕನ ಭೇಟಿಯಾಗುವ ಆಸೆ ಇದ್ದೇ ಇರುತ್ತದೆ. ಸೌಜನ್ಯಯುತ ಭೇಟಿ, ಆಡಳಿತ ಹಾಗೂ ಇಲಾಖೆ, ರಾಜಕಾರಣ ಬಗ್ಗೆ ಮಾತನಾಡಿರಬಹುದು ಎಂದರು.
ಕೊರೊನಾ ಲಸಿಕೆ ಇನ್ನೂ ಬಿಡುಗಡೆ ಆಗಿಲ್ಲ, ಅಧಿಕೃತ ಆದ್ಮೇಲೆ ನಿಮಗೂ ಗೊತ್ತಾಗುತ್ತೆ. ಕೇಂದ್ರ ಸರ್ಕಾರ, ಪ್ರಧಾನಿಯವರು ಕ್ಲಿನಿಕಲ್ ಟ್ರಯಲ್ ನಡೆಸಿರುವ ಕಂಪನಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ. ಅಡ್ವಾನ್ಸ್ ಆಗಿ ಮೂರನೇ ಹಂತ ತಲುಪಿದ ಕಂಪನಿ ಜೊತೆ ಕೇಂದ್ರ ಸಮಾಲೋಚನೆ ನಡೆಸಿದ್ದು, ಆ ಕಂಪನಿಗಳ ಜೊತೆ ಕೇಂದ್ರ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಯಾವ ಕಂಪನಿಗೆ WHO ಅಧಿಕೃತ ಅಂತ ಘೋಷಣೆ ಮಾಡ್ತಾರೊ ಆ ಲಸಿಕೆ ಸಿಗುವ ಕೆಲಸ ಆಗಲಿದೆ. ಭಾರತ ದೇಶದಲ್ಲಿ ದೊಡ್ಡ ಮಟ್ಟಿಗೆ ಲಸಿಕೆ ಸಿಗುವ ಕೆಲಸ ಆಗುತ್ತದೆ. ಲಸಿಕೆ ಬಂದ್ರೆ ಅದರ ಸಂಗ್ರಹಕ್ಕೆ ಎಲ್ಲ ವ್ಯವಸ್ಥೆ ಆಗಿದೆ. ಕೇಂದ್ರ ಆರೋಗ್ಯ ಸಚಿವರ ಜೊತೆ ವಿಡಿಯೋ ಸಂವಾದವೂ ಆಗಿದೆ. ಕೊರೊನಾ ಲಸಿಕೆ ಬಂದ್ಮೇಲೆ ವಿತರಣೆ ನಿಧಾನ ಆಗಬಾರದೆಂದು ಸಕಲ ವ್ಯವಸ್ಥಗೆಗಳನ್ನು ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲಸಿಕೆ ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಇದಲ್ಲದೇ ಆರೋಗ್ಯ ಇಲಾಖೆಯಲ್ಲಿ ಜನಪರ ಬದಲಾವಣೆಗಳು ನಡೀತಿದೆ. ಅಂತಾರಾಷ್ಟ್ರೀಯ ಗುಣಮಟ್ಟದ 108 ಆ್ಯಂಬುಲೆನ್ಸ್ ಸರ್ವೀಸ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ವೈರಸ್ ವಿಚಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಾವು ಯಾರೂ ಸಹ ಹೊರೆತಾಗಿಲ್ಲ.ಎಷ್ಟು ಕಾಲೇಜು ವಿದ್ಯಾರ್ಥಿಗಳಿಗೆ ಕೊರೊನಾ ಬಂದಿದೆ ನಿಖರ ಮಾಹಿತಿ ಇಲ್ಲ. ಉನ್ನತ ಶಿಕ್ಷಣ ಸಚಿವರ ಜೊತೆ ಮಾತನಾಡಿ ಮಾಹಿತಿ ಪಡೆಯುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.