ಅಥಣಿ : ಜನರು ಈ ಸರ್ಕಾರದ ಕೆಲಸ ಮಾಡಿಸಿಕೊಳ್ಳಬೇಕು ಅಂದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ಆಫೀಸ್ ಸುತ್ತೋದು, ಮನೆಗೆ ಭೇಟಿ ನೀಡಿ ಮನವರಿಕೆ ಮಾಡೋದು ಕಾಮನ್. ಆದರೆ, ಇಲ್ಲೊಂದು ಹೋರಾಟ ಸಮಿತಿ ತಮ್ಮ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ, ದೇವರಿಗೆ ಹರಕೆ ಕಟ್ಟಿದ್ದಾರೆ. ಅಂಜನಾದ್ರಿ ಪರ್ವತ ಹತ್ತಿ ಹನುಮಂತನಿಗೆ ಮೊರೆ ಇಟ್ಟಿರುವ ಈ ಸಮಿತಿ, ಶೀಘ್ರದಲ್ಲೇ ಈ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡಪ್ಪ ದೇವರೆ ಅಂತಾ ಕೇಳಿಕೊಂಡಿದೆ.
ಹೀಗೆ ದೇವಸ್ಥಾನದಲ್ಲಿ ಕೆಂಪು ವಸ್ತ್ರದಲ್ಲಿ ಕಾಯಿ ಕಟ್ಟುತ್ತಿರೋ ಇವರು ಅಥಣಿ ಹೋರಾಟ ಸಮಿತಿಯ ಸದಸ್ಯರು. ಮೊನ್ನೆಯಷ್ಟೇ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿದ್ದ ಈ ತಂಡ, ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ಅಂಜನಾದ್ರಿಯ ಹನುಂತನಿಗೆ ಮೊರೆ ಇಟ್ಟು ಬಂದಿದೆ.
ಈಗಾಗಲೇ ಗೋಕಾಕ್ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯ ಜೊತೆಗೆ ಈಗ ಹೊಸದಾಗಿ ಅಥಣಿಯನ್ನೂ ಸಹ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಥಣಿಯ ಕೊನೆ ಭಾಗದದಿಂದ ಬೆಳಗಾವಿಗೆ ಹೋಗಿ ಬರೋಕೆ ಬರೊಬ್ಬರಿ 320 ಕಿ.ಮೀ ದೂರವಾಗುತ್ತೆ. ಹೀಗಾಗಿ, ಇಷ್ಟು ದೊಡ್ಡ ಜಿಲ್ಲೆಯಾಗಿ ಬೆಳಗಾವಿ ಬೆಳೆದಿದೆ. ವಿಸ್ತೀರ್ಣದ ಆಧಾರ ಮೇಲೆ ಜಿಲ್ಲೆಯನ್ನ ವಿಭಜನೆ ಮಾಡಿ ಅಥಣಿಯನ್ನ ಹೊಸ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಕಳೆದ ಎರಡು ತಿಂಗಳ ಹಿಂದಷ್ಟೆ ಅಥಣಿ ಹೋರಾಟ ಸಮಿತಿಯಿಂದ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ 25 ಸಾವಿರ ಪತ್ರಗಳನ್ನ ರವಾನಿಸುವ ಕೆಲಸ ಆಗಿದೆ. ಪತ್ರ ಮುಖೇನ ಅಥಣಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಅಥಣಿ ಹೋರಾಟ ಸಮಿತಿ, ವಿವಿಧ ಮಠಾಧೀಶರು ಹಾಗೂ ಅಥಣಿಯ ನಾಗರಿಕರಿಂದ ಮನವಿ ಮಾಡಿಕೊಂಡಿದೆ. ಆದರೆ, ಈವರೆಗೂ ಸಹ ಸರ್ಕಾರ ಅದಕ್ಕೆ ಸೂಕ್ತ ರೀತಿ ಉತ್ತರಿಸಿಲ್ಲ.
ಹೀಗಾಗಿ, ಅಥಣಿ ಹೋರಾಟ ಸಮಿತಿಯ ಸದಸ್ಯರು ಅಥಣಿಯನ್ನು ಜಿಲ್ಲೆಯನ್ನಾಗಿ ಮಾಡಬೇಕು ಅಂತಾ ಹನುಂಮತನ ಮೊರೆ ಹೋಗಿದ್ದಾರೆ. ಒಂದು ವೇಳೆ ಅಥಣಿಯನ್ನ ಜಿಲ್ಲೆಯನ್ನಾಗಿ ಮಾಡದಿದ್ದರೆ ಮುಂಬರುವ ಎಲ್ಲಾ ಚುನಾವಣೆಗಳನ್ನೂ ತಾಲೂಕಿನಾದ್ಯಂತ ಬಹಿಷ್ಕರಿಸುತ್ತೇವೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ಸರ್ಕಾರಕ್ಕೆ 25 ಸಾವಿರದಷ್ಟು ಪತ್ರ ಬರೆದು, ಪತ್ರ ಚಳವಳಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಈಗ ಹೋರಾಟ ಸಮಿತಿಯ ಸದಸ್ಯರು ಹನುಮನ ಮೊರೆ ಹೋಗಿದ್ದಾರೆ. ಇದಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತೆ ಎಂದು ಕಾದು ನೋಡಬೇಕು.