ಬೆಳಗಾವಿ : ಕಾಂಗ್ರೆಸ್ನವರ ಕೂಸು ಹುಟ್ಟಲ್ಲ. ಕುಲಾವಿನೂ ಹೊಲಿಸುವ ಸಂದರ್ಭವೂ ಬರೋದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ರಾಜ್ಯ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಅಭ್ಯರ್ಥಿಗಾಗಿ ನಡೆಯುತ್ತಿರುವ ಆಂತರಿಕ ಸಂಘರ್ಷದ ಬಗ್ಗೆ ವ್ಯಂಗ್ಯವಾಡಿದರು.
ಸದಾಶಿವನಗರದ ಗೃಹ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದ ಬಗ್ಗೆ ಚರ್ಚೆ ಮಾಡೋದು ಸೂಕ್ತ ಅಲ್ಲ. ಆದರೂ, ಮಾಧ್ಯಮಗಳಲ್ಲಿ ಆಗುತ್ತಿರುವ ಚರ್ಚೆಗಳನ್ನು ನೋಡಿದ್ರೆ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವುದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ.
ಆದ್ರೆ, ಕಾಂಗ್ರೆಸ್ನವರ ಕೂಸು ಹುಟ್ಟಲ್ಲ. ಕುಲಾವಿನೂ ಹೊಲಿಸುವ ಸಂದರ್ಭ ಬರಲ್ಲ. ಉಳಿದ ಎರಡು ವರ್ಷಗಳಲ್ಲಿ ಬಿಜೆಪಿ ಪಕ್ಷ ಉತ್ತಮ ಆಡಳಿತ ಕೊಟ್ಟು ಜನಪ್ರಿಯತೆ ಪಡೆಯುತ್ತದೆ. ಮುಂದಿನ 2023ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿದ್ದವರೇ ಬೆನ್ನಿಗೆ ಚೂರಿ ಹಾಕಿದ್ದಾರೆಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾವ ಆಲೋಚನೆ ಇಟ್ಟುಕೊಂಡು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಯಾವ ಸಂದರ್ಭದಲ್ಲಿ ಹೇಳಿದಾರೆ ಎಂಬುದೂ ಗೊತ್ತಿಲ್ಲ. ಕೇಳಿ ತಿಳಿದುಕೊಳ್ಳೋಣ ಎಂದರು.
ಶಾಸಕ ರಮೇಶ್ ಜಾರಕಿಹೊಳಿ ಸುತ್ತೂರು ಮಠಕ್ಕೆ ಭೇಟಿ ವಿಚಾರಕ್ಕೆ, ಯಾಕೆ ಅವರು ಭೇಟಿ ನೀಡಬಾರದಾ?, ಅವರು ಹೊರ ರಾಜ್ಯದವರೋ, ಹೊರದೇಶದವರೋ?. ಸುತ್ತೂರು ಮಠ ನಮ್ಮ ಧಾರ್ಮಿಕ ಕೇಂದ್ರ. ಅಲ್ಲಿ ಅನೇಕ ರಾಜಕಾರಣಿಗಳು, ಸಂತರು, ಭಕ್ತಾದಿಗಳು ಭೇಟಿ ನೀಡುತ್ತಾರೆ. ಅವರವರ ಶ್ರದ್ಧಾ ಕೇಂದ್ರಗಳಿಗೆ ಹೋಗೋದರಲ್ಲಿ ಏನೂ ತಪ್ಪಿಲ್ಲ ಎಂದರು.
ಅಥಣಿಯಲ್ಲಿ ಆರ್ಎಸ್ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ- ರಮೇಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ, ಅಥಣಿಯಲ್ಲಿ ನಮ್ಮ ಆರ್ಎಸ್ಎಸ್ ಪ್ರಮುಖರು ಇರುವುದರಿಂದ ಭೇಟಿ ಕೊಟ್ಟಿದ್ದಾರೆ. ನಾನು ಅಥಣಿಯಲ್ಲಿದ್ದಾಗ ಒಂದು ದಿನವಾದರೂ ಅಲ್ಲಿಗೆ ಭೇಟಿ ಕೊಡುತ್ತೇನೆ. ನಮ್ಮ, ಸರ್ಕಾರದ ಏಳ್ಗೆ ಕುರಿತು ಮಾರ್ಗದರ್ಶನ ಕೊಡುವುದು ಆರ್ಎಸ್ಎಸ್ನಲ್ಲಿದೆ. ಮಾರ್ಗದರ್ಶನ ಪಡೆಯಲು ಎಲ್ಲರೂ ಹೋಗುತ್ತಾರೆ.
ರಮೇಶ್ ಜಾರಕಿಹೊಳಿ ಹೋಗಿದ್ದನ್ನೇ ಏಕೆ ಪಾಯಿಂಟ್ ಔಟ್ ಮಾಡ್ತೀರಿ. ಎಲ್ಲರೂ ಹೋಗ್ತಾರೆ. ಶಾಸಕ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ತಾರೆಂಬ ಮಾಹಿತಿ ಇಲ್ಲ ಎಂದು ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ದೆಹಲಿ ಪ್ರತಿಭಟನೆಗೆ ಬೆಂಬಲ.. ಬೆಂಗಳೂರಲ್ಲಿ ರೈತರನ್ನು ವಶಕ್ಕೆ ಪಡೆದ ಪೊಲೀಸರು