ಬೆಳಗಾವಿ : ಅವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸ್ಥಳೀಯರನ್ನು ಹೆದರಿಸಲು ಗನ್ ಸಮೇತ ಗುತ್ತಿಗೆದಾರನೋರ್ವ ಕಾಮಗಾರಿ ಸ್ಥಳಕ್ಕೆ ಬಂದಿರುವ ಘಟನೆ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.
ಕಿತ್ತೂರು ಪಟ್ಟಣದ ಆರನೇ ವಾರ್ಡ್ನಲ್ಲಿ ಕೈಗೊಳ್ಳಲಾದ ರಸ್ತೆ ಕಾಮಗಾರಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸ್ಥಳೀಯರನ್ನು ಹೆದರಿಸಲು ಬಾಬು ಮಲ್ಲಾಪುರಕರ ಎಂಬಾತ ಗನ್ ಸಮೇತ ಕಾಮಗಾರಿ ಸ್ಥಳಕ್ಕೆ ಆಗಮಿಸಿ ಹೆದರಿಸಿದ್ದಾನೆ ಎನ್ನಲಾಗುತ್ತಿದೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ವೈಯಕ್ತಿಕವಾಗಿ ಬಳಸುವ ಗನ್ಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದ್ದಾರೆ. ಆದರೆ ಗುತ್ತಿಗೆದಾರ ಬಾಬು ಮಲ್ಲಾಪುರಕರ ಮಾತ್ರ ಸಾರ್ವಜನಿಕ ಸ್ಥಳದಲ್ಲಿ ಗನ್ ಇಟ್ಟುಕೊಂಡು ಓಡಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.