ಬೆಳಗಾವಿ: ಇಲ್ಲಿನ ಆಟೋನಗರದ ಕೆಎಸ್ಸಿಎ ಮೈದಾನದಲ್ಲಿ ಜ.5 ರಿಂದ ಕರ್ನಾಟಕ ಹಾಗೂ ಆಂಧ್ರಪ್ರದೇಶ ಮಧ್ಯೆ ಸಿಕೆ ನಾಯ್ಡು ಟೂರ್ನಿಯ ಲೀಗ್ ಪಂದ್ಯ ನಡೆಯಲಿದೆ.ಉಭಯ ತಂಡಗಳು ಕುಂದಾನಗರಿಗೆ ಆಗಮಿಸಿದ್ದು,ಇಂದು ಕೆಎಸ್ಸಿಎ ಮೈದಾನಕ್ಕೆ ಆಗಮಿಸಿ ಅಭ್ಯಾಸ ನಡೆಸಿದವು.
ಕರ್ನಾಟಕ ತಂಡದಲ್ಲಿ ಕುಂದಾನಗರಿಯ ಭರವಸೆಯ ಬ್ಯಾಟ್ಸ್ಮನ್ ಕಮ್ ವಿಕೇಟ್ ಕೀಪರ್ ಸುಜಯ್ ಸಾಥೇರಿ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಸಾಲಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಹೈದ್ರಾಬಾದ್ ವಿರುದ್ಧ ಸುಜಯ್ 175 ರನ್ ದಾಖಲಿಸಿ ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದರು.
ಈಟಿವಿ ಭಾರತದ ಜತೆಗೆ ಮಾತನಾಡಿದ ಸುಜಯ್, 14 ವರ್ಷದಿಂದ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದೇನೆ. 14 ವರ್ಷದ ತಪ್ಪಿಸ್ಸಿನ ಫಲವಾಗಿ ತವರು ಮೈದಾನದಲ್ಲಿ ಆಡುವ ಅವಕಾಶ ಸಿಕ್ಕಿದೆ. ಕಳೆದ ವರ್ಷವೂ ಸಿಕೆ ನಾಯ್ಡು ಟ್ರೋಫಿ ಆಡಿದ್ದೇನೆ. ಆದರೆ ಆಗ ಪಂದ್ಯ ಬೆಳಗಾವಿಯಲ್ಲಿ ನಡೆದಿರಲಿಲ್ಲ. ಈ ವರ್ಷ ಬೆಳಗಾವಿಯಲ್ಲಿ ಪಂದ್ಯ ನಡೆಯುತ್ತಿದೆ. ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಸಹಕಾರ, ಪ್ರೋತ್ಸಾಹದ ಭರವಸೆಯಲ್ಲಿದ್ದೇನೆ ಎಂದರು.
ನಂತರ ಮಾತನಾಡಿದ ಅವರು, ತವರು ಮೈದಾನದಲ್ಲಿ ಬ್ಯಾಟಿಂಗ್ ಆಡುತ್ತಿರುವುದರಿಂದ ಕಾನ್ಫಿಡೆನ್ಸ್ ಇಮ್ಮುಡಿಗೊಂಡಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನನ್ನ ನೆಚ್ಚಿನ ಆಟಗಾರ. ಅವರೇ ನನ್ನ ಸ್ಪೂರ್ತಿ. ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ, ಕರ್ನಾಟಕ ರಣಜಿ ತಂಡ ಸೇರುವ ಅಭಿಲಾಷೆ ಹೊಂದಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದ್ದರು.