ಅಥಣಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 20.ಕಿ. ಮೀ ರಸ್ತೆ ಡಾಂಬರೀಕರಣಗೊಳಿಸಲಾಗುತ್ತಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ತಿಳಿಸಿದ್ದಾರೆ.
ಅಥಣಿ ತಾಲೂಕಿನ ಆಕಳಕಲ್, ಹುಲಗಬಾಳ ಗ್ರಾಮದಿಂದ ಹಲ್ಯಾಳ ಗ್ರಾಮದವರೆಗೆ ಪಿ.ಎಂ.ಜಿ.ಎಸ್.ವೈ ಯೋಜನೆಯಡಿ ಅಂದಾಜು ಮೊತ್ತ 813.48 ಲಕ್ಷ ರೂ. ವೆಚ್ಚದಲ್ಲಿ 12.45 ಕಿ. ಮೀ ರಸ್ತೆ ಡಾಂಬರೀಕರಣ ಹಾಗೂ ಅವರಖೋಡ ಗ್ರಾಮದಿಂದ ರಡ್ಡೇರಹಟ್ಟಿ ಕರ್ಲಾಳ ತೋಟದವರೆಗೆ ಪಿಎಂಜಿಎಸ್ವೈ ಯೋಜನೆಯಡಿ ಅಂದಾಜು ಮೊತ್ತ 547.02 ಲಕ್ಷ ರೂ. ವೆಚ್ಚದಲ್ಲಿ 7.87 ಕಿ.ಮೀ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಕಳೆದ ಬಾರಿ ಪ್ರವಾಹ ಬಂದಾಗ ಆಸ್ತಿ - ಪಾಸ್ತಿ ಹಾನಿ ಸರ್ವೇ ಕಾರ್ಯದಲ್ಲಿ ತಾರತಮ್ಯವಾಗಿದೆ ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಮರು ಸರ್ವೇ ಮಾಡಿದ ಕೆಲ ಮನೆಗಳ ಹಣ ಬಂದಿಲ್ಲ. ಇನ್ನು ಕೆಲವರಿಗೆ ಅರ್ಧ ಬಂದಿದೆ. ಈ ವಿಷಯವಾಗಿ ನಾನು ಮತ್ತು ಡಿಸಿಎಂ ಲಕ್ಷ್ಮಣ್ ಸವದಿ ಸೇರಿ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.