ಅಥಣಿ: ತಾಲೂಕಿನಲ್ಲಿ ಒಂದೇ ದಿನದಲ್ಲಿ ಹನ್ನೆರಡು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗುತ್ತಿದ್ದಂತೆ ಚಿಕ್ಕೋಡಿ ವಿಭಾಗದ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಶೈಲಜಾ ತಮ್ಮಣ್ಣವರ್ ತಾಲೂಕಿಗೆ ಭೇಟಿ ನೀಡಿದರು.
ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಜೊತೆ ಸಭೆ ನಡೆಸಿ ಕೊರೊನಾ ವೈರಸ್ ಪ್ರಕರಣಗಳಿರುವ ಗ್ರಾಮಗಳಲ್ಲಿ ಹಾಗೂ ತಾಲೂಕಿನಲ್ಲಿ ಆರೋಗ್ಯ ಇಲಾಖೆಯಿಂದ ಜರುಗಿಸಬೇಕಾದ ಕ್ರಮಗಳ ಬಗ್ಗೆ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿ, ತಾಲೂಕಿನಲ್ಲಿ ಜಾರ್ಖಂಡ್ ಪ್ರವಾಸ ಮಾಡಿದರವ ಸಂಖ್ಯೆ 44 ಇದ್ದು, ಎಲ್ಲರ ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಿದಾಗ ಹನ್ನೆರಡು ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಅವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಇನ್ನು ತಾಲೂಕಿನ ಝುಂಜರವಾಡ, ಸವದಿ, ನಂದಗಾವ್ಗಳ ಸೋಂಕು ಹೊಂದಿರುವ ಗ್ರಾಮದಲ್ಲಿ ಪ್ರತಿ ಮನೆಯ ಸರ್ವೇ ಕಾರ್ಯ ಮೂರು ದಿನದಲ್ಲಿ ಪೂರ್ಣ ಮಾಡುತ್ತೇವೆ. ಮೂರು ಗ್ರಾಮಗಳಲ್ಲಿ ಜನಸಂಖ್ಯೆ 25500 ಆಗಬಹುದು. ಪ್ರತಿ ಮನೆಗೆ ಭೇಟಿ ನೀಡುತ್ತೇವೆ. ಗರ್ಭಿಣಿ ತಾಯಂದಿರು ಹಾಗೂ ಹತ್ತು ವರ್ಷಗಳ ಕೆಳಗಿನ ಮಕ್ಕಳು ಮತ್ತು ಅರವತ್ತು ವರ್ಷ ದಾಟಿದವರ ಮೇಲೆ ಹೆಚ್ಚು ನಿಗಾ ವಹಿಸಲಾಗುವುದು ಎಂದರು.