ಬೆಳಗಾವಿ: ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ನಾವು ಮಾಡಿರುವ ಕಾಮಗಾರಿಗಳನ್ನು ತಾವು ಮಾಡಿರುವುದಾಗಿ ಹೇಳುತ್ತಾರೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದ ಹಾಗೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಸ್ಮರಣಾರ್ಥವಾಗಿ ಸಂಗೊಳ್ಳಿ ಗ್ರಾಮ ಮತ್ತು ರಾಯಣ್ಣ ಗಲ್ಲಿಗೇರಿದ ಸ್ಥಳವನ್ನು ಅಭಿವೃದ್ಧಿ ಮಾಡಲು ನಾನು ಸಿಎಂ ಇದ್ದಾಗ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದೆ. ಸದ್ಯ ಗ್ರಾಮದಲ್ಲಿ ನಡೆಯುತ್ತಿರುವ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಕಾಮಗಾರಿ ಸುಮಾರು 75ರಷ್ಟು ಕೆಲಸ ಆಗಿದೆ. ಇನ್ನು 25ರಷ್ಟು ಬಾಕಿ ಇದೆ ಎಂದರು.
2016-17 ರಲ್ಲಿ ಪ್ರಾಧಿಕಾರ ರಚನೆ ಮಾಡಲಾಗಿತ್ತು. ನಾನು ಸಿಎಂ ಇದ್ದಾಗ ಸೈನಿಕ ಶಾಲೆ ನಿರ್ಮಾಣಕ್ಕೆ 267.97ಲಕ್ಷ ಕೊಟ್ಟು ಪ್ರಾಧಿಕಾರ ಹಣ ಬಿಡುಗಡೆ ಮಾಡಿದ್ದೆ. ನಾನು ಸಿಎಂ ಆಗಿದ್ದಾಗ ಸಂಗೊಳ್ಳಿ ರಾಯಣ್ಣ ಸೈನಿಕ್ ಶಾಲೆ ನಿರ್ಮಾಣ ಮತ್ತು ರಾಕ್ ಗಾರ್ಡನ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ್ದೇನೆ. ಮೊದಲನೆಯ ಬ್ಯಾಚ್ ಆರಂಭವಾಗಿದೆ. ಇಲ್ಲಿಯವರೆಗೆ 240ಕೋಟಿ ಹಣ ಖರ್ಚಾಗಿದೆ.
ಇನ್ನು, 100 ಕೋಟಿ ಬಿಡುಗಡೆಯಾಗಬೇಕು. ಬಾಕಿ ಉಳಿದ ಹಣ ಬಿಡುಗಡೆ ಮಾಡಲು ನಾನು ಸಿಎಂ ಜೊತೆಗೆ ಮಾತನಾಡಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ. 2023 ಜನವರಿ ಅಥವಾ ಪೆಬ್ರವರಿಯಲ್ಲಿ ಕಾಮಗಾರಿ ಮುಕ್ತಾಯವಾಗುತ್ತದೆ. ಕಿತ್ತೂರು ಕೋಟೆಗೆ ಸಂಬಂಧಪಟ್ಟ ಎಲ್ಲ ನೈಜ ಚಿತ್ರಣಗಳನ್ನು ರಾಕ್ ಗಾರ್ಡನ್ ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ರಾಯಣ್ಣ ಸ್ಮರಣಾರ್ಥವಾಗಿ ಸಂಗೊಳ್ಳಿ ರಾಯಣ್ಣ ಸೈನಿಕ್ ಸ್ಕೂಲ್, ಸಮಾಧಿ ಸ್ಥಳ ಅಭಿವೃದ್ಧಿ, ಮ್ಯೂಸಿಯಂಗೆ 70ಕೋಟಿ, ರಾಕ್ ಗಾರ್ಡನ್ ಗೆ 14ಕೋಟಿ, ಕಲ್ಯಾಣ ಮಂಟಪಕ್ಕೆ 2ಕೋಟಿ, ಕೆರೆ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಶಂಕು ಸ್ಥಾಪನೆ ನಾನೇ ಮಾಡಿದ್ದು, ಈಗ ತಾವು ಮಾಡಿದ್ದು ಅಂತಾ ಬಸವರಾಜ ಬೊಮ್ಮಾಯಿಯವರು ಹೇಳುತ್ತಾರೆ ಎಂದರು.
ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿಲ್ಲ: ತ್ವರಿತವಾಗಿ ಬಿಜೆಪಿ ಸರ್ಕಾರ ಸ್ಪಂದಿಸಲಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿಲ್ಲ. ಇದೆಲ್ಲ ಮಾಡಿದ್ದು ನಾನು ಸಿಎಂ ಇದ್ದಾಗ. ಡಿಫೆನ್ಸ್ ನವರು ಕೂಡಾ ಅನುದಾನ ಕೊಡಬೇಕು. ಪ್ರತಿವರ್ಷ 12 ಕೋಟಿ ರೂಪಾಯಿ ಖರ್ಚು ಆಗುತ್ತದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಕಾಂಗ್ರೆಸ್ ನವರು ಗಾಂಧಿ ಕುಟುಂಬದ ಅನುಯಾಯಿಗಳು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಚುನಾವಣೆ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷ ಆಗಿದ್ದಾರೆ. ಬಿಜೆಪಿಯಲ್ಲಿ ಚುಣಾವಣೆಯಾಗಿ ಯಾರಾದರೂ ಅಧ್ಯಕ್ಷ ಆಗಿದ್ದಾರಾ? ಎಂದು ಪ್ರಶ್ನಿಸಿದರು.
ಸಿಎಂ ಇಬ್ರಾಹಿಂಗೆ ಸಿದ್ದರಾಮಯ್ಯ ಟಾಂಗ್: ಕಾಂಗ್ರೆಸ್ನಿಂದ ಜೆಡಿಎಸ್ ಗೆ 15ಜನ ಶಾಸಕ ಬರುತ್ತಾರೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ರಾಹಿಂ ಮಾತಿಗೆ ತೂ ಎಂದರು. ಸಿಎಂ ಇಬ್ರಾಹಿಂ ಸುಳ್ಳು ಹೇಳ್ತಾನೆ. ಅವನ ಮಾತಿಗೆ ಬೆಲೆ ಕೊಡೋದಕ್ಕೆ ಹೋಗಬೇಡಿ. ಜೆಡಿಎಸ್ ನವರೇ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ. ರಾತ್ರಿ ಕಂಡ ಬಾವಿಗೆ ಹಗಲು ಬೀಳಲ್ಲ ಎಂದು ಸಿಎಂ ಇಬ್ರಾಹಿಂಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು. 130 ರಿಂದ 150 ಸೀಟು ಗೆಲ್ಲುತ್ತೇವೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಂಗೊಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೆ ಮೊದಲು ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಹೊರವಲಯದಲ್ಲಿರುವ ಸಂಗೊಳ್ಳಿ ರಾಯಣ್ಣನ ರಾಕ್ ಗಾರ್ಡನ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. 10ಎಕರೆ ಪ್ರದೇಶದಲ್ಲಿರುವ ರಾಕ್ ಗಾರ್ಡನ್ನಲ್ಲಿ ನಿರ್ಮಾಣದ ಕಾಮಗಾರಿ ವೀಕ್ಷಣೆ ಮಾಡಿದರು. ಗಾರ್ಡನ್ ವೀಕ್ಷಣೆ ಬಳಿಕ 100 ಏಕರೆಯ ಸೈನಿಕ ಶಾಲೆಯ ಕಟ್ಟಡ ಕಾಮಗಾರಿ ಹಾಗೂ ಬೃಹತ್ ಕ್ರೀಡಾ ಮೈದಾನವನ್ನು ಸಿದ್ದರಾಮಯ್ಯ ವೀಕ್ಷಣೆ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಎಂ.ಬಿ ಪಾಟೀಲ, ಶಾಸಕ ಮಹಾಂತೇಶ ಕೌಜಲಗಿ, ಹೆಚ್. ಎಂ ರೇವಣ್ಣ, ಕಿತ್ತೂರು ಮಾಜಿ ಶಾಸಕ ಡಿ.ಬಿ ಇನಾಂದಾರ್ ಸೇರಿ ಸ್ಥಳೀಯ ಕಾಂಗ್ರೆಸ್ ನಾಯಕರು ಸಾಥ್ ನೀಡಿದರು.
ಓದಿ: ನಾನು ಎಲ್ಲಿ ನಿಂತುಕೊಳ್ಳಬೇಕು ಅಂತಾ ಪಕ್ಷ ತೀರ್ಮಾನ ಮಾಡುತ್ತದೆ: ವಿಪಕ್ಷ ನಾಯಕ ಸಿದ್ದರಾಮಯ್ಯ