ಬೆಳಗಾವಿ: ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿರುವ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಫ್ಲೆಕ್ಸ್, ಬ್ಯಾನರ್ಳಿಗೆ ಕಡಿವಾಣ ಬಿದ್ದಿಲ್ಲ. ಪರಿಣಾಮ ಇವುಗಳು ನಗರದ ಸೌಂದರ್ಯಕ್ಕೆ ಧಕ್ಕೆ ತಂದೊಡ್ಡಿವೆ. ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳು ಅದೆಷ್ಟೇ ಕಠಿಣ ಕ್ರಮ ಕೈಗೊಂಡರೂ ಕೂಡ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮಾತ್ರ ನಿಂತಿಲ್ಲ.
ಗೋಡೆ ಮೇಲೆ, ವಿದ್ಯುತ್ ಪರಿವರ್ತಕಗಳ ಮೇಲೆ ಫ್ಲೆಕ್ಸ್ಗಳು, ಬ್ಯಾನರ್ಗಳು ರಾರಾಜಿಸುತ್ತಿವೆ. ರಸ್ತೆ ಪಕ್ಕದಲ್ಲಿರುವ ಮರಗಳಿಗೆ ಮೊಳೆ ಹೊಡೆದು ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ. ಜಾತ್ರೆ, ರಾಜಕೀಯ ಸಮಾರಂಭ, ರಾಜಕೀಯ ನಾಯಕರ ಜನ್ಮದಿನ, ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ನಗರಕ್ಕೆ ಆಗಮಿಸುವಾಗ ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಮಾವೇಶದ ವೇಳೆ ಅತಿ ಹೆಚ್ಚು ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಲಾಗುತ್ತಿದೆ.
ನಗರ ಸೌಂದರ್ಯಕ್ಕೆ ಧಕ್ಕೆ:
ಇದರಿಂದ ಇಡೀ ನಗರದ ಸೌಂದರ್ಯವೇ ಹಾಳಾಗುತ್ತಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಚರ್ಚೆಯಾದರೂ ನಿರ್ದಿಷ್ಟ ನಿರ್ಧಾರ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಕಣ್ಣುತಪ್ಪಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿ ನಗರದ ಸೌಂದರ್ಯವನ್ನು ಹಾಳು ಮಾಡುತ್ತದ್ದಾರೆ.
ಅಕ್ರಮ ಕಟೌಟ್ಗಳ ಹಾವಳಿ:
ನಗರದಲ್ಲಿ ಅಕ್ರಮವಾಗಿ ಕಟೌಟ್ ಹಾಕಿ ದಂಧೆ ನಡೆಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಖಾಸಗಿ ಜಾಗಗಳಲ್ಲಿ ಪಾಲಿಕೆಗೆ ತೆರಿಗೆ ಪಾವತಿಸದೆ ಜಾಹೀರಾತು ಫಲಕ ಅಳವಡಿಸುತ್ತಿದ್ದಾರೆ. ಜಾಹೀರಾತು ಫಲಕಗಳಿಂದ ಬರುವ ಆದಾಯವನ್ನು ಖಾಸಗಿ ವ್ಯಕ್ತಿಗಳೇ ಪಡೆಯುತ್ತಿದ್ದಾರೆಯೇ ಹೊರತು ಪಾಲಿಕೆಗೆ ತೆರಿಗೆ ಪಾವತಿಸುತ್ತಿಲ್ಲ. ಇಂತಹ ಹಲವು ಜಾಗಗಳ ಮೇಲೆ ಈಗಾಗಲೇ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ, ಬ್ಯಾನರ್, ಫ್ಲೆಕ್ಸ್ಗಳನ್ನು ತೆರವು ಮಾಡಿದ್ದಾರೆ.
ನೋಟಿಸ್ಗೆ ಡೋಂಟ್ ಕೇರ್:
ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕದಂತೆಯೂ ಹಲವು ಬಾರಿ ಪಾಲಿಕೆಯಿಂದ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಆದರೂ ನಗರದಲ್ಲಿ ಮಹಾನಗರ ಪಾಲಿಕೆಯ ನಿಯಮ ಉಲ್ಲಂಘನೆ ಆಗುತ್ತಿದ್ದು, ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಹೆಚ್ಚುತ್ತಲೇ ಇದೆ.
ಏಕವ್ಯಕ್ತಿಗೆ ಟೆಂಡರ್ ರದ್ದು:
ಮಹಾನಗರದ ಕೆಲ ಪ್ರದೇಶಗಳಲ್ಲಿ ಜಾಹೀರಾತು ಹಾಗೂ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಸ್ಥಳ ನಿಗದಿಪಡಿಸಲಾಗಿದೆ. ಏಕ ವ್ಯಕ್ತಿಗೆ ಟೆಂಡರ್ ನೀಡುತ್ತಿರುವ ಕಾರಣ ನಗರದಲ್ಲಿ ಕೆಲ ಅವ್ಯವಹಾರಕ್ಕೆ ಕಾರಣವಾಗಿದೆ. ಹೀಗಾಗಿ ಈ ಸಂಬಂಧ ಹಲವು ವ್ಯಕ್ತಿಗಳಿಗೆ ಟೆಂಡರ್ ನೀಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಇದರಿಂದ ಪಾಲಿಕೆಯ ಆದಾಯದಲ್ಲಿ ಆಗುತ್ತಿರುವ ಪೋಲು ತಡೆಯಬಹುದು ಎಂಬುದು ಪಾಲಿಕೆ ಅಧಿಕಾರಿಗಳ ಲೆಕ್ಕಾಚಾರ.
ಇದನ್ನೂ ಓದಿ: ಶಿವಮೊಗ್ಗ ಮನಪಾ ನೂತನ ಜಾಹೀರಾತು ನೀತಿ ಶೀಘ್ರ ಜಾರಿ; ಆಯುಕ್ತ
ಅಲ್ಲದೇ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವಿಗೆ ವಿಶೇಷ ತಂಡ ರಚಿಸಲು ಪಾಲಿಕೆ ನಿರ್ಧರಿಸಿದೆ. ಇದರಿಂದ ಪಾಲಿಕೆಗೂ ಹೆಚ್ಚಿನ ಆದಾಯ ಹರಿದುಬರಲಿದೆ.
ಪಾಲಿಕೆ ಆಯುಕ್ತರು ಏನಂತಾರೆ?
ಈಟಿವಿ ಭಾರತ ಜೊತೆಗೆ ಮಾತನಾಡಿರುವ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಹಾವಳಿ ಇರುವುದು ನಿಜ. ಆದರೆ ಇದರ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ವಹಿಸಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಇದರಿಂದ ಪಾಲಿಕೆಗೂ ಆದಾಯ ಹರಿದುಬರಲಿದೆ. ಅಲ್ಲದೇ ವಿಶೇಷ ಕಾರ್ಯಾಚರಣೆ ಮೂಲಕ ಅನಧಿಕೃತ ಪ್ಲೆಕ್ಸ್, ಬ್ಯಾನರ್ ತೆರವು ಮಾಡುವ ಪ್ರಕ್ರಿಯೆ ನಿರಂತರವಾಗಿದೆ ಎಂದರು.