ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಜುಲೈ 17ರಂದು ಮೃತ ಪಟ್ಟ ಚಮ್ಮಾರಿಕೆ ಕೆಲಸ ಮಾಡುತ್ತಿದ್ದ ಸದಾಶಿವ ಹಿರಟ್ಟಿ ಎಂಬ ವ್ಯಕ್ತಿಯ ಮೃತ ದೇಹವನ್ನು ಅಮಾನವೀಯವಾಗಿ ತಳ್ಳುವ ಗಾಡಿಯಲ್ಲಿ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದನ್ನು ಖಂಡಿಸಿ ಪ್ರಜಾ ಪರಿವರ್ತನಾ ಫೌಂಡೇಶನ್ ವತಿಯಿಂದ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದಿಂದ ಆರ್ಥಿಕ ಸಬಲತೆ ಇಲ್ಲದ ಮತ್ತು ನಿರ್ಗತಿಕರಿಗೆ ಶವಸಂಸ್ಕಾರಕ್ಕೆ ಧನ ಸಹಾಯ ಮಾಡುತ್ತಿದ್ದರೂ ಕೂಡ ಪ್ರಾಮಾಣಿಕವಾಗಿ ದುಡಿದು ಜೀವನ ಸಾಗಿಸುತ್ತಿದ್ದ ಸದಾಶಿವ ಹಿರಟ್ಟಿಯ ಶವಸಂಸ್ಕಾರಕ್ಕೆ ಅಥಣಿ ಪುರಸಭೆ, ತಾಲೂಕು ಆಡಳಿತ ಮತ್ತು ವೈದ್ಯಕೀಯ ಇಲಾಖೆಯ ಸಿಬ್ಬಂದಿ ಮುಂದೆ ಬರದೆ ಇರುವುದನ್ನು ಖಂಡಿಸಿದ ಪ್ರಜಾ ಪರಿವರ್ತನಾ ಫೌಂಡೇಶನ್ ಪದಾಧಿಕಾರಿಗಳು ಮತ್ತು ಸದಸ್ಯರು ಸರ್ಕಾರ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ದೀಪಕ ಶಿಂಧೇ, ಮೃತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸರ್ಕಾರ ಸಹಾಯಧನ ನೀಡುತ್ತಿದ್ದರೂ ಕೂಡ ಈ ಯೋಜನೆಯ ಬಗ್ಗೆ ಹಲವು ಜನರಿಗೆ ಮಾಹಿತಿ ಇಲ್ಲದಿರುವುದು ವಿಪರ್ಯಾಸ. ಕೊರೊನಾ ಸಂಕಷ್ಟದ ಸಮಯದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಾಗ ಅಂತ್ಯ ಸಂಸ್ಕಾರಕ್ಕೆ ಜನರು ಹಿಂದೇಟು ಹಾಕಿದ್ದು, ಮನುಕುಲಕ್ಕೆ ಮಾಡಿದ ಅಪಮಾನ.
ಸಮಾಜ ಸೇವಕರು, ಜನಪ್ರತಿನಿಧಿಗಳು ಬಡವರು ಮತ್ತು ಆರ್ಥಿಕ ಸಬಲರಲ್ಲದ ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಅಗತ್ಯವಿದೆ. ಸದಾಶಿವ ಹಿರಟ್ಟಿ ಕುಟುಂಬಕ್ಕೆ ಸರ್ಕಾರದ ಯೋಜನೆ ತಲುಪಿಸಬೇಕು. ತಕ್ಷಣ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು.