ಅಥಣಿ: ಲಾಕ್ ಡೌನ್ ಆದೇಶದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿರುವ ಕಾರಣ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಆಹಾರ ಪದಾರ್ಥಗಳ ದರ ನಿಗದಿಪಡಿಸಿದೆ.

ಕೆಲವು ಅಂಗಡಿಗಳಲ್ಲಿ ಜೀವನಾವಶ್ಯಕ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ಅಥಣಿ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಲಾಕ್ ಡೌನ್ ಆದೇಶದಂತೆ ಜನಸಾಮಾನ್ಯರ ಓಡಾಟ ಸ್ಥಗಿತಗೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ದಿನಸಿ ವ್ಯಾಪಾರಸ್ಥರು ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಏರಿಸಿರುವುದರಿಂದ ಜನರು ಕಂಗಾಲಾಗಿದ್ದಾರೆ. ಗ್ರಾಹಕರ ದೂರು ಆಧರಿಸಿ ತಾಲೂಕು ಆಡಳಿತ ಎಚ್ಚೆತ್ತುಕೊಂಡು ದಿನಸಿ ಪದಾರ್ಥಗಳ ಮಾರುಕಟ್ಟೆ ದರ ನಿಗದಿಪಡಿಸಿ, ಪ್ರಕಟಣೆ ಹೊರಡಿಸಿದೆ.
ಮಾರುಕಟ್ಟೆ ದರಕ್ಕಿಂತ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಯಾರಾದರೂ ಆಹಾರ ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಮಾರಿದರೆ ಗ್ರಾಹಕರು ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಲಾಗಿದೆ.