ಚಿಕ್ಕೋಡಿ : ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಹಾಗೂ ದೇವಸ್ಥಾನ ಕಳವು ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗೋಕಾಕ ತಾಲೂಕಿನ ಅರಭಾವಿ ಗ್ರಾಮದ ಸಂತೋಷ ಗಂಗಾರಾಮ (46), ವಿಶಾಲ ನರಸಿಂಗ ಶೇರಖಾನೆ, ಚಂದ್ರಕಾಂತ ಪೋತದಾರ ಬಂಧಿತ ಆರೋಪಿಗಳು. ಬಂಧಿತರಿಂದ 18,59,776 ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಲಾದ ವಾಹನವನ್ನು ಪೊಲೀಸರು ವಶ ಪಶಪಡಿಸಿಕೊಂಡಿದ್ದಾರೆ.
ಹುಕ್ಕೇರಿ ತಾಲೂಕಿನ ಜಿನರಾಳ ಕ್ರಾಸ್ ಬಳಿ ಆರೋಪಿ ಸಂತೋಷ ಗಂಗಾರಾಮ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಸ್ನೇಹಿತ ವಿಶಾಲ ನರಸಿಂಗ ಶೇರಖಾನೆನೊಂದಿಗೆ ಬೆಳಗಾವಿ ಜಿಲ್ಲೆಯ 12 ಭಾಗಗಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಸಂಬಂಧ ಮತ್ತೋರ್ವ ಆರೋಪಿ ವಿಶಾಲ ಶೇರಖಾನೆ ಎಂಬುವನನ್ನು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಕ್ರಾಸ್ ಬಳಿ ಬಂಧಿಸಲಾಗಿದೆ. ಕಳ್ಳತನದ ಆಭರಣಗಳನ್ನು ಕೊಲ್ಲಾಪೂರ ಪಟ್ಟಣದ ಚಂದ್ರಕಾಂತ ಪೋತದಾರ ಎಂಬವನಿಗೆ ಮಾರಾಟ ಮಾಡಲಾಗಿದ್ದು, ಅನಧಿಕೃತ ಬಂಗಾರ, ಬೆಳ್ಳಿ ಪಡೆದುಕೊಂಡಿದ್ದ ಆರೋಪದಡಿ ಚಂದ್ರಕಾಂತನನ್ನು ಬಂಧಿಸಲಾಗಿದೆ.