ಬೆಳಗಾವಿ: ನಗರ ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಸರಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ಮೂರು ದ್ವಿಚಕ್ರ ವಾಹನ ಹಾಗೂ 8 ಲಕ್ಷದ 99 ಸಾವಿರ ಮೌಲ್ಯದ 184 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಉದ್ಯಮಬಾಗ ಪ್ರದೇಶದ ಲಕ್ಷೀ ನಗರ ಎಕೆಪಿ ಫೌಂಡ್ರಿ ರಸ್ತೆಯ ನಿವಾಸಿಗಳಾದ ದೀಪಕ್ ಸುರೇಶ್ ಅಗಸಿಮನಿ (21), ದೇವರಾಜ ಯಲ್ಲಪ್ಪ ಪೂಜಾರಿ (21), ನಾಗರಾಜ ಚಿದಾನಂದ ತಳವಾರ (20) ಹಾಗೂ ಅಸ್ಲಂ ಮೌಲಾಸಾಬ ಶೇರೆಗಾರ (20) ಬಂಧಿತರು.
ಮೇ 11 ರಂದು ನಗರದ ದೇಶಪಾಂಡೆ ಚಾಳದ ವಿಮಲಾ ಸೀತಾರಾಮ ಶಿಂಧೆ ಎಂಬುವರು ಸಂತೋಷ - ನಿರ್ಮಲ ಟಾಕೀಸ್ ಬಳಿ ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಜ್ಜಿ ಅಜ್ಜಿ ಎಂದು ಕರೆದಿದ್ದಾರೆ. ಹಿಂದಿರುಗಿ ನೋಡುತ್ತಿದ್ದಂತೆ ಮತ್ತೊಂದು ಬೈಕ್ನಲ್ಲಿ ಬಂದ ಇಬ್ಬರು ಕೊರಳಲ್ಲಿದ್ದ 32 ಸಾವಿರ ರೂ. ಮೌಲ್ಯದ 12 ಗ್ರಾಂ. ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ನಗರದ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಖಡೇಬಜಾರ್ ಹಾಗೂ ಉದ್ಯಮಬಾಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.