ಅಥಣಿ: ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರದ ಸರ್ಕಾರಿ ವೈದರ ಯಡವಟ್ಟಿಗೆ ನವಜಾತ ಶಿಶುವೊಂದು ಮರಣ ಹೊಂದಿರುವ ದಾರುಣ ಘಟನೆ ನಗರದಲ್ಲಿ ಸಂಭವಿಸಿದೆ.
ತೆಲಸಂಗ ಗ್ರಾಮದ ಗರ್ಭಿಣಿಯೋರ್ವಳು ಮೊದಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಅಲ್ಲಿನ ವೈದ್ಯರು ಈಕೆಯ ಆರೋಗ್ಯ ಸ್ಥಿತಿ ಗಮನಿಸಿ, ಈ ಕೂಡಲೇ ಅಥಣಿ ತಾಲೂಕು ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ವೈದ್ಯರ ಸಲಹೆಯಂತೆ ಮಹಿಳೆ ತಾಲೂಕು ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಅಲ್ಲಿನ ವೈದ್ಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಬರೀ ಔಷಧಿ ಕೊಟ್ಟು ಕಳುಹಿಸಿದ್ದಾರೆ ಎಂಬ ಆರೋಪ ಮೃತ ಮಗುವಿನ ಕುಟುಂಬಸ್ಥರು ಮಾಡಿದ್ದಾರೆ.
ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ಗರ್ಭಿಣಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಹೆರಿಗೆಯಾಗಿದೆ. ಆದ್ರೆ ಬಳಿಕ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ವೈದ್ಯಾಧಿಕಾರಿಗಳು ಮಾಡಿದ ನಿರ್ಲಕ್ಷ್ಯದಿಂದಾಗಿ ಈ ಜಗತ್ತನ್ನು ನೋಡುವ ಮೊದಲೇ ಶಿಶುವೊಂದು ಕಣ್ಣು ಮುಚ್ಚಿರುವುದು ಕುಟುಂಬಕ್ಕೆ ಭರಿಸಲಾಗದ ನೋವು ತಂದಿದ್ದು, ತಾಲೂಕು ಆಸ್ಪತ್ರೆಯ ವೈದ್ಯರಿಗೆ ಕುಟುಂಬಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.