ಬೆಂಗಳೂರು: ಯುವರಾಜ್ ಪ್ರಕರಣದಲ್ಲಿ ಕೆಲವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದು, ಎಲ್ಲಾ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಯುವರಾಜ್ ಆರ್ಎಸ್ಎಸ್, ಬಿಜೆಪಿ ನಾಯಕರ ಜೊತೆ ಫೋಟೋ ತೆಗೆಸಿಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಹಲವು ಜನ ಇತರರ ಜತೆ ಫೊಟೋ ತೆಗೆಸಿಕೊಳ್ಳುತ್ತಾರೆ. ತುಂಬಾ ಜನ ಅಪರಾಧ ಇರುವವರು ಫೋಟೋ ತೆಗೆಸಿಕೊಳ್ಳುತ್ತಾರೆ ಎಂದರು.
ನಮ್ಮ ಜೊತೆಗೂ ಫೋಟೋ ತೆಗೆಸಿಕೊಳ್ಳುತ್ತಾರೆ. ಇಲ್ಲಿ ಪ್ರಶ್ನೆ ಅದಲ್ಲ, ಪ್ರಶ್ನೆ ಇರುವುದು ಯುವರಾಜ ಅವರ ವ್ಯವಹಾರಗಳು. ಆ ನಿಟ್ಟಿನಲ್ಲಿ ತನಿಖೆ ನಡೀತಿದೆ. ಯುವರಾಜ್ ವಿರುದ್ಧ ಚಾರ್ಜ್ ಶೀಟ್ ಹಾಕುವವರೆಗೂ ನಮ್ಮ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದರು.