ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಲಾಕ್ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮನೆಯಿಂದ ಕರ್ತವ್ಯ ನಿರ್ವಹಿಸುವ ಷರತ್ತಿಗೆ ಒಪ್ಪಿಕೊಳ್ಳುವ ವಿಧಾನಸಭೆ ಸಚಿವಾಲಯದ ಸಿಬ್ಬಂದಿಗೆ ಇಂದಿನಿಂದ ಒಂದು ವಾರಗಳ ಕಾಲ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಸಚಿವಾಲಯದ ಯಾವುದೇ ಶಾಖೆಯ ಕಾರ್ಯದಲ್ಲಿ ಬಾಕಿ ಉಳಿದಿರುವ ಅಥವಾ ತುರ್ತು ಸಂದರ್ಭ ಇರುವ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ನಿರ್ವಹಿಸಬೇಕು. ಅವಶ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕೆಲಸಗಳನ್ನು ಬಾಕಿ ಉಳಿಸುವಂತಿಲ್ಲ. ಅಂತೆಯೇ ಮನೆಯಿಂದ ಕಾರ್ಯನಿರ್ವಹಿಸುವಂತಹ ಶಾಖೆಯ ಕೆಲಸಗಳನ್ನು ಮನೆಯಿಂದ ನಿರ್ವಹಿಸಲು ಅನುಮತಿ ನೀಡಲಾಗುತ್ತದೆ. ಈ ಷರತ್ತಿಗೊಳಪಟ್ಟು ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಜು.21 ರವರೆಗೆ ಕಾರ್ಯನಿರ್ವಹಿಸಬಹುದು ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಆದೇಶ ಹೊರಡಿಸಿದ್ದಾರೆ.
ಕಚೇರಿಗೆ ಹಾಜರಾಗಲು ವಿನಾಯಿತಿ ನೀಡಲಾಗುತ್ತದೆ. ಶಾಸಕರ ಭವನದ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟಂತೆ ಅಲ್ಲಿನ ಅಧಿಕಾರಿಗಳು/ಸಿಬ್ಬಂದಿ ಅಗತ್ಯತೆಗೆ ಅನುಗುಣವಾಗಿ ನಿಯೋಜಿಸಿದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.