'ಮುಂಗಾರು ಮಳೆ' ಖ್ಯಾತಿಯ ನಟಿ ಪೂಜಾಗಾಂಧಿ ರಾಜಕೀಯದಲ್ಲಿದ್ದರೂ ಸಕ್ರೀಯರಾಗಿಲ್ಲ.'ಸಂಹಾರಿಣಿ' ಚಿತ್ರದ ಶೂಟಿಂಗ್ ಬಿಡುವಿನ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. 'ನಾನಿನ್ನೂ ಜೆಡಿಎಸ್ ಪಕ್ಷದಲ್ಲಿದ್ದೇನೆ. ನನ್ನ ತಾಯಿಗೆ ಆರೋಗ್ಯ ಸರಿ ಇಲ್ಲದ ಕಾರಣ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಚಾರದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಆದಷ್ಟು ಬೇಗ ರಾಜಕಾರಣದಲ್ಲಿ ಸಕ್ರೀಯಳಾಗುತ್ತೇನೆ. ನಾಳಿನ ಫಲಿತಾಂಶದಲ್ಲಿ ನಮ್ಮ ಪಕ್ಷ ಅತ್ಯಧಿಕ ಸೀಟು ಗೆಲ್ಲುತ್ತದೆ' ಎಂದು ಭರವಸೆ ವ್ಯಕ್ತಪಡಿಸಿದರು.
ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆ ಪ್ರಶ್ನಿಸಿದಾಗ 'ನಾನು ಮಂಡ್ಯ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುವಷ್ಟು ದೊಡ್ಡವಳಲ್ಲ. ಅವರೆಲ್ಲಾ ದೊಡ್ಡವರು, ನಾನು ಅವರ ಮುಂದೆ ಬಹಳ ಚಿಕ್ಕವಳು. ಇನ್ನು ಸಮೀಕ್ಷೆ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಹೆಚ್ಚಿಗೆ ಟಿವಿ ನೋಡುವುದಿಲ್ಲ ಎಂದರು. ರಾಜಕೀಯದ ಬಗ್ಗೆ ಹೆಚ್ಚಿಗೆ ಮಾತನಾಡದ ಪೂಜಾ ಆದಷ್ಟು ಬೇಗ 'ಸಂಹಾರಿಣಿ' ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಎಲ್ಲರೂ ನೋಡಬೇಕಾದ ಸಿನಿಮಾ' ಎಂದು ಹೇಳಿದರು.
ಪೂಜಾಗಾಂಧಿ 2012 ರಲ್ಲಿ ಜೆಡಿಎಸ್ ಸೇರ್ಪಡೆಯಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರಾಯಚೂರು ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಅನುಭವಿಸಿದ್ದರು. ನಂತರ ಮತ್ತೆ 2018ರಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು.