ಬೆಂಗಳೂರು: ಕೋವಿಡ್ನ ಈ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಎರಡು ವರ್ಷಗಳಿಗೆ ಸಂಸದರ ನಿಧಿಯನ್ನು ಸ್ಥಗಿತಗೊಳಿಸಿದೆ. ಈ ಹಿಂದಿನ ಆರ್ಥಿಕ ಸಾಲಿನಲ್ಲಿ ಸಂಸದರ ನಿಧಿಯಡಿ ರಾಜ್ಯದ ಸಂಸದರು ತಮ್ಮ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಇದಕ್ಕಾಗಿ ಸಂಸದರ ನಿಧಿಯಡಿ ಬಳಕೆಯಾದ ಹಣ, ಖರ್ಚಾಗದೇ ಉಳಿದಿರುವ ಹಣ ಹಾಗೂ ಕಾಮಗಾರಿಗಳ ಸ್ಥಿತಿಗತಿಯ ಸಮಗ್ರ ವರದಿ ಇಲ್ಲಿದೆ.
ಸಂಸದರ ನಿಧಿ ಎಂದರೇನು?
ಸಂಸದರ ನಿಧಿಯು ಲೋಕಸಭಾ ಸದಸ್ಯರು ಹಾಗೂ ರಾಜ್ಯ ಸಭಾ ಸದಸ್ಯರಿಗೆ ಕೊಡಮಾಡುವ ಹಣವಾಗಿದೆ. ಸಂಸದರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಈ ಹಣವನ್ನು ಬಳಸಲಾಗುತ್ತದೆ. ರಾಜ್ಯಸಭೆ ಸದಸ್ಯರು ರಾಜ್ಯದ ಒಂದು ಅಥವಾ ಹೆಚ್ಚಿನ ಜಿಲ್ಲೆಗಳಲ್ಲಿ ಕಾಮಗಾರಿಗಳಿಗೆ ಶಿಫಾರಸು ಮಾಡಬಹುದಾಗಿದೆ.
ಪ್ರತಿ ಸಂಸದರಿಗೆ ವಾರ್ಷಿಕ ಐದು ಕೋಟಿ ಬಿಡುಗಡೆ: ಬಳಕೆ ಹೇಗೆ?
![MPs welfare works status, MPs welfare works status news, state MPs welfare works, ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ, ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ ಸುದ್ದಿ, ರಾಜ್ಯ ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ, ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ ಸುದ್ದಿ,](https://etvbharatimages.akamaized.net/etvbharat/prod-images/kn-bng-04-mpladfund-status-script-hyc-7201951_24052021003540_2405f_1621796740_198.jpg)
ಪ್ರತಿ ಸಂಸದರಿಗೆ ವಾರ್ಷಿಕ 5 ಕೋಟಿ ರೂ. ಸಂಸದರ ನಿಧಿ ಹಂಚಿಕೆಯಾಗುತ್ತದೆ. ಈ ನಿಧಿ ಹಣವನ್ನು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕಾರ್ಯಯೋಜನೆಯನ್ನು ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಸಂಸದರು ಈ ರೀತಿ ಶಿಫಾರಸು ಮಾಡಿದ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳು ಸಂಸದರ ನಿಧಿಯಿಂದ ಹಣ ಬಿಡುಗಡೆ ಮಾಡುತ್ತಾರೆ. ಸಂಸದರಿಗೆ ಕಾಮಗಾರಿಗಳನ್ನು ಶಿಫಾರಸು ಮಾಡುವ ಅಧಿಕಾರ ಮಾತ್ರ ಇರುತ್ತದೆ. ಅದಕ್ಕೆ ಅನುಗುಣವಾಗಿ ಡಿಸಿಗಳು ಸಂಸದರ ನಿಧಿ ಹಣವನ್ನು ಬಿಡುಗಡೆ ಮಾಡಬೇಕು.
ಕೋವಿಡ್ ಸಂಕಷ್ಟ- ಎರಡು ವರ್ಷ ನಿಧಿ ಬಿಡುಗಡೆ ಸ್ಥಗಿತ:
ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎರಡು ವರ್ಷಗಳಿಗೆ ಸಂಸದರ ನಿಧಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. 2020-21 ಮತ್ತು 2021-22 ಸಾಲಿನಲ್ಲಿ ಸಂಸದರ ನಿಧಿಯನ್ನು ಸ್ಥಗಿತಗೊಳಿಸಲಾಗಿದೆ. ಈ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲು ಕೇಂದ್ರ ಹಣಕಾಸು ಇಲಾಖೆಗೆ ಅಧಿಕಾರ ನೀಡಲಾಗಿದೆ. ಇತ್ತ ರಾಜ್ಯದ ಅನೇಕ ಮಾಜಿ ಸಂಸದರ ಎಂಪಿ ಫಂಡ್ ಹಣ ಬಿಡುಗಡೆಯಾಗದೇ ಹಾಗೇ ಬಾಕಿ ಉಳಿದುಕೊಂಡಿದೆ.
ರಾಜ್ಯದಲ್ಲಿ ಸಂಸದರ ನಿಧಿ ಬಳಕೆ ಹೇಗಿದೆ?
ರಾಜ್ಯದಲ್ಲಿ ಸಂಸದರ ನಿಧಿ ಬಳಕೆ ತೃಪ್ತಿದಾಯಕವಾಗಿದೆ. 2014-15ರಿಂದ 2018-19ರ ವರೆಗೆ ಕೇಂದ್ರ ಸರ್ಕಾರ ಸಂಸದರ ನಿಧಿಯಿಂದ 607.5 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ 50.66 ಕೋಟಿ ಸಂಸದರ ನಿಧಿ ಹಣ ಖರ್ಚಾಗದೆ ಬಾಕಿ ಉಳಿದುಕೊಂಡಿದೆ.
2019-20ರಲ್ಲಿ ಕೇಂದ್ರ ಸರ್ಕಾರ ರಾಜ್ಯದ ಸಂಸದರ ನಿಧಿಯಿಂದ 120 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆ ಮಾಡಲಾದ ಹಣದಲ್ಲಿ ಬಹುತೇಕರು 94-98% ವರೆಗೆ ಸಂಸದರ ನಿಧಿ ಹಣವನ್ನು ಬಳಸಿದ್ದಾರೆ. ಒಟ್ಟು 74.26 ಕೋಟಿ ಸಂಸದರ ನಿಧಿ ಹಣ ಖರ್ಚಾಗದೆ ಬಾಕಿ ಉಳಿದುಕೊಂಡಿದೆ. ಈ ಮಾರ್ಚ್ ಅಂತ್ಯದ ವರೆಗೆ ಕೇಂದ್ರ ಸರ್ಕಾರ 46.93 ಕೋಟಿ ರೂ. ಸಂಸದರ ಹಣವನ್ನು ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ.
ಒಟ್ಟು ಲಭ್ಯವಿರುವ ಸಂಸದರ ನಿಧಿ ಮೊತ್ತ:
ಒಟ್ಟು 142.64 ಕೋಟಿ ರೂ.ರಷ್ಟು ಹಾಲಿ ಹಾಗೂ ಮಾಜಿ ಲೋಕಸಭೆ ಸದಸ್ಯರ ಸಂಸದರ ನಿಧಿ ಹಣ ಲಭ್ಯವಿದೆ. ಇದರಲ್ಲಿ ಪ್ರಮುಖವಾಗಿ ಬಳ್ಳಾರಿ 4.18 ಕೋಟಿ ರೂ., ಬೆಳಗಾವಿ 8.44 ಕೋಟಿ ರೂ., ಬೆಂಗಳೂರು ನಗರ 8.34 ಕೋಟಿ ರೂ. ಚಾಮರಾಜನಗರ 47.63 ಕೋಟಿ ರೂ. ಕಲಬುರ್ಗಿ 7.24 ಕೋಟಿ ರೂ., ರಾಯಚೂರು 8.33 ಕೋಟಿ ರೂ., ಮಂಡ್ಯ 6.12 ಕೋಟಿ ರೂ. ಮಾಜಿ ಹಾಗೂ ಹಾಲಿ ಲೋಕಸಭೆ ಸದಸ್ಯರ ಸಂಸದರ ನಿಧಿಯಲ್ಲಿ ಹಣ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![MPs welfare works status, MPs welfare works status news, state MPs welfare works, ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ, ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ ಸುದ್ದಿ, ರಾಜ್ಯ ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ, ಸಂಸದರು ಕೈಗೊಂಡ ಕ್ಷೇತ್ರಾಭಿವೃದ್ಧಿ ಕಾಮಗಾರಿಗಳ ಸ್ಥಿತಿಗತಿ ಸುದ್ದಿ,](https://etvbharatimages.akamaized.net/etvbharat/prod-images/kn-bng-04-mpladfund-status-script-hyc-7201951_24052021003540_2405f_1621796740_600.jpg)
ಇನ್ನು ಹಾಲಿ ಮತ್ತು ಮಾಜಿ ರಾಜ್ಯ ಸಭೆ ಸದಸ್ಯರ ಸಂಸದರ ನಿಧಿಯಡಿ 51.55 ಕೋಟಿ ರೂ. ಹಣ ಲಭ್ಯವಿದೆ. ಇದರಲ್ಲಿ ಬೆಳಗಾವಿ 1.28 ಕೋಟಿ ರೂ., ಬೆಂಗಳೂರು ನಗರ ಜಿಲ್ಲೆಯಲ್ಲಿನ ಸಂಸದರ ನಿಧಿಯಡಿ 43.85 ಕೋಟಿ ರೂ, ಧಾರವಾಡ 4.46 ಕೋಟಿ ರೂ. ಹಾಗೂ ಉಡುಪಿ 1.96 ಕೋಟಿ ರೂ. ಹಣ ಲಭ್ಯವಿದೆ.
ಸಂಸದರ ನಿಧಿ- ಹಣ ಬಿಡುಗಡೆಗೆ ಮನವಿ
2020-21 ಹಾಗೂ 2021-22ರ ಸಂಸದರ ನಿಧಿ ಸ್ಥಗಿತಗೊಳಿಸುವ ನಿರ್ಧಾರದ ಬಳಿಕ ರಾಜ್ಯದ ಮೂವರು ಮಾಜಿ ಹಾಗೂ ಹಾಲಿ ಸಂಸದರು ಬಾಕಿ ಉಳಿದಿರುವ ಸಂಸದರ ನಿಧಿ ಹಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಮಾಜಿ ರಾಜ್ಯ ಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್ 7.50 ಕೋಟಿ ರೂ, ಸಂಸದ ಅನಂತ್ ಕುಮಾರ್ ಹೆಗಡೆ 10 ಕೋಟಿ ರೂ. ಹಾಗೂ ರಾಜ್ಯಸಭೆ ಸದಸ್ಯ ರಾಜೀವ್ ಗೌಡ 7.50 ಕೋಟಿ ರೂ. ಸಂಸದರ ನಿಧಿಯಡಿ ಬಾಕಿ ಇರುವ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಕಾಮಗಾರಿ ಸ್ಥಿತಿಗತಿ ಹೇಗಿದೆ?
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸಂಸದರ ನಿಧಿಯಡಿ 156 ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಪೈಕಿ 137 ಕಾಮಗಾರಿಗಳು ಪೂರ್ಣಗೊಂಡಿದೆ. ಕೇಂದ್ರ ಸಚಿವ ಸದಾನಂದ ಗೌಡ ಕ್ಷೇತ್ರ ಬೆಂಗಳೂರು ಉತ್ತರದಲ್ಲಿ 345 ಕಾಮಗಾರಿಗಳಲ್ಲಿ 296 ಕಾಮಗಾರಿ ಪೂರ್ಣಗೊಂಡಿದೆ. ಇನ್ನು ನಳಿನ್ ಕುಮಾರ್ ಕಟೀಲ್ರ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣವಾಗಿವೆ.
ಸಚಿವ ಪ್ರಹ್ಲಾದ್ ಜೋಷಿಯವರ ಧಾರವಾಡ ಕ್ಷೇತ್ರದಲ್ಲಿ 621 ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಈ ಪೈಕಿ 432 ಕಾಮಗಾರಿಗಳು ಪೂರ್ಣವಾಗಿವೆ. ಪ್ರತಾಪ್ ಸಿಂಹರ ಮೈಸೂರು ಕ್ಷೇತ್ರದಲ್ಲಿ 552 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 420 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶೋಭಾ ಕರಂದ್ಲಾಜೆ ಪ್ರತಿನಿಧಿಸುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 837 ಕಾಮಗಾರಿ ಕೈಗೆತ್ತಿಕೊಂಡಿದ್ದು, 646 ಕಾಮಗಾರಿಗಳು ಪೂರ್ಣವಾಗಿವೆ. ನಿಧನರಾದ ಸುರೇಶ್ ಅಂಗಡಿ ಪ್ರತಿನಿಧಿಸುತ್ತಿದ್ದ ಬೆಳಗಾವಿ ಕ್ಷೇತ್ರದಲ್ಲಿ 727 ಕಾಮಗಾರಿಗಳು ಪ್ರಾರಂಭಿಸಲಾಗಿದ್ದು, ಈವರೆಗೆ ಪೂರ್ಣವಾಗಿದ್ದು 235 ಕಾಮಗಾರಿಗಳು ಮಾತ್ರ. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಸಂಸದರ ನಿಧಿಯಡಿ 296 ಕಾಮಗಾರಿ ಕೈಗೆತ್ತಿಕೊಂಡಿದ್ದು, ಆ ಪೈಕಿ 292 ಕಾಮಗಾರಿಗಳು ಪೂರ್ಣವಾಗಿವೆ. ಅನಂತ ಕುಮಾರ್ ಹೆಗಡೆ ಪ್ರತಿನಿಧಿಸುವ ಉ.ಕನ್ನಡ ಕ್ಷೇತ್ರದಲ್ಲಿ 706 ಕಾಮಗಾರಿಗಳನ್ನು ಪ್ರಾರಂಭಿಸಿದ್ದು, ಆ ಪೈಕಿ 530 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪಿ.ಸಿ.ಮೋಹನ್, ಸಂಸದರ ನಿಧಿಯಡಿ ಎಲ್ಲಾ ಹಣವನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಸಂಬಂಧ ಡಿಸಿಗಳಿಗೆ ಶಿಫಾರಸು ಮಾಡಿದ್ದು, ಹಣದ ಕೊರತೆ ಎದುರಾಗಿಲ್ಲ ಎಂದು ತಿಳಿಸಿದ್ದಾರೆ.
ಜೆಡಿಎಸ್ ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ತಮ್ಮ ಅಧಿಕಾರವಧಿಯಲ್ಲಿ ಸಂಸದರ ನಿಧಿ ಹಣವನ್ನು ಸಂಪೂರ್ಣವಾಗಿ ಬಳಸಲಾಗಿದೆ ಎಂದಹ ಸ್ಪಷ್ಟಪಡಿಸಿದ್ದಾರೆ. ಯಾವುದೇ ಹಣ ಬಾಕಿ ಉಳಿಸಿಲ್ಲ, ನಾನು ಕೈಗೆತ್ತಿಕೊಂಡಿದ್ದ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದ್ದಾರೆ.