ಬೆಂಗಳೂರು: ಜಾರಿನಿರ್ದೇಶನಾಲಯದ ವಶದಲ್ಲಿರುವ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಒಬ್ಬ ಸಂತನೂ ಅಲ್ಲ, ಸಾರ್ವಭೌಮನೂ ಅಲ್ಲ, ನ್ಯಾಯಾಲಯದ ಮುಂದಿರುವ ವಿಚಾರಣಾಧೀನ ಆರೋಪಿ, ಈತನಿಗಾಗಿ ಬೆಂಬಲಿಗರ ಒತ್ತಡ ತಂತ್ರ ಹಾಗೂ ಪ್ರತಿಭಟನೆ ಮಾಡುವುದು ಖಂಡನೀಯ ಎಂದು, ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಕರಣದ ತನಿಖೆ ಇನ್ನೂ ಅಪೂರ್ಣವಾಗಿರುವಾಗಲೇ ಕಾನೂನು ಭಂಗದ ಕ್ರಿಯೆಗಳಿಗೆ, ಜನರನ್ನು ಪ್ರಚೋದಿಸಲಾಗುತ್ತಿದೆ, ಜಾತಿ ರಾಜಕಾರಣ ಮಾಡಲಾಗುತ್ತಿದೆ. ಇದರಿಂದ ಜಾತೀಯ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ. ಈ ಹಿಂದೆ ಬಿಹಾರದಲ್ಲಿ ಲಾಲೂ ಪ್ರಸಾದ್ ಪ್ರಕರಣ ಹಾಗೂ, ಸಂಸದ ಸೈಯದ್ ಶಹಾಬುದ್ದೀನ್ ಪ್ರಕರಣದಲ್ಲೂ ಅಸಹ್ಯಕರ ಘಟನೆಗಳು ನಡೆದಿವೆ. ಹೀಗಾಗಿ ಡಿಕೆ.ಶಿವಕುಮಾರ್ ವಿಚಾರದಲ್ಲಿಯೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದಿದ್ದಾರೆ.