ಬೆಂಗಳೂರು: ಹದಿಮೂರು ಅತೃಪ್ತ ಶಾಸಕರ ಪೈಕಿ ಕ್ರಮಬದ್ಧವಲ್ಲದ ರಾಜೀನಾಮೆ ಪತ್ರ ನೀಡಿದ್ದ ಎಂಟು ಶಾಸಕರು ನಾಳೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಇಂದು ವಿಧಾನಸೌಧ ಕಚೇರಿಗೆ ಆಗಮಿಸಿ 13 ಅತೃಪ್ತ ಶಾಸಕರ ರಾಜೀನಾಮೆ ಪತ್ರವನ್ನು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ 8 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಲ್ಲ ಎಂದು ಸ್ಪೀಕರ್ ತಿಳಿಸಿದ್ದರು. ಹೀಗಾಗಿ ಎಂಟು ಶಾಸಕರಿಗೆ ತಿಳುವಳಿಕಾ ಪತ್ರ ನೀಡಲಾಗಿದ್ದು, ಅವರು ಇಚ್ಛಿಸಿದರೆ ಮತ್ತೆ ರಾಜೀನಾಮೆ ಪತ್ರ ನೀಡಬಹುದು ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಎಂಟು ಮಂದಿ ಅತೃಪ್ತ ಶಾಸಕರು ನಾಳೆ ಬೆಂಗಳೂರಿಗೆ ವಾಪಸಾಗಿ, ಸ್ಪೀಕರ್ಗೆ ಮತ್ತೆ ರಾಜೀನಾಮೆ ಪತ್ರ ನೀಡಲಿದ್ದಾರೆ ಎನ್ನಲಾಗಿದೆ.
ಶನಿವಾರ ಒಟ್ಟು 13 ಶಾಸಕರು ವಿಧಾನಸೌಧದಲ್ಲಿ ಸ್ಪೀಕರ್ ಅನುಪಸ್ಥಿತಿಯಲ್ಲಿ ರಾಜೀನಾಮೆ ಪತ್ರ ನೀಡಿದ್ದರು. ಎಂಟು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಮುನಿರತ್ನ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಹೆಚ್.ವಿಶ್ವನಾಥ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ. ಹೀಗಾಗಿ ಅವರು ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ, ಸ್ಪೀಕರ್ ಭೇಟಿಯಾಗಿ ರಾಜೀನಾಮೆ ಪತ್ರ ನೀಡಲಿದ್ದಾರೆ. ಎಂಟು ಮಂದಿ ಶಾಸಕರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ದೋಸ್ತಿಗಳಿಗೆ ಸಣ್ಣದಾದ ಆಶಾಕಿರಣ ಮೂಡಿದೆ. ಯಾಕೆಂದರೆ ಇವರುಗಳು ವಾಪಸ್ಸಾದ ಸಂದರ್ಭ ಅತೃಪ್ತರ ಮನವೊಲಿಸುವ ಅವಕಾಶ ದೋಸ್ತಿಗಳಿಗೆ ಸಿಗಲಿದೆ.