ಬೆಂಗಳೂರು: ಲಾಕ್ಡೌನ್ ನಡುವೆಯೂ ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ತಲಾ 50 ಎಕರೆಗಳಷ್ಟು ಜಾಗದ ಹೂಳನ್ನು ಮೇಲೆತ್ತಲಾಗಿದೆ. ಈ ಕೆರೆಗಳ ದಂಡೆಯಲ್ಲಿ ರಾಶಿ ಹಾಕಿರುವ ಹೂಳು ವಿಲೇವಾರಿ ಮಾಡಲು ಗುರುತಿಸಿರುವ ಕ್ವಾರಿಗೆ ಸಾಗಿಸುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಅವಳಿ ಕೆರೆಗಳ ಮಾಲಿನ್ಯದ ಬಗ್ಗೆ ಹಾಗೂ ಇವುಗಳ ಅಭಿವೃದ್ಧಿಯನ್ನು ಕಡೆಗಣಿಸಿದ ಬಗ್ಗೆ ಹಸಿರು ನ್ಯಾಯ ಮಂಡಳಿ ತರಾಟೆಗೆ ತೆಗೆದುಕೊಂಡ ಬಳಿಕ ಕೆರೆಗಳ ಅಭಿವೃದ್ಧಿಗೆ ಬಿಡಿಎ ಯೋಜನೆ ರೂಪಿಸಿತ್ತು. ಕಳೆದ ಫೆಬ್ರವರಿಯಲ್ಲಿ ಟೆಂಡರ್ ಆಹ್ವಾನಿಸಿತ್ತು. ಹೂಳೆತ್ತುವ ಕಾಮಗಾರಿ ಆರಂಭವಾಗುವಷ್ಟರಲ್ಲಿ ಕೋವಿಡ್–19 ನಿಯಂತ್ರಣಕ್ಕೆ ಲಾಕ್ಡೌನ್ ಜಾರಿಯಾಗಿತ್ತು.
ಏಪ್ರಿಲ್ 24 ರಿಂದ ಹೂಳೆತ್ತುವ ಕಾಮಗಾರಿ ಆರಂಭಿಸಿದ್ದು. ಇದುವರೆಗೆ ಒಟ್ಟು 100 ಎಕರೆಗಳಷ್ಟು ಜಾಗದಲ್ಲಿ ಹೂಳೆತ್ತಲಾಗಿದೆ. 5 ಅಡಿ ಆಳಕ್ಕೆ ಹೂಳು ತೆರವುಗೊಳಿಸಲಾಗಿದೆ. ಎರಡೂ ಕೆರೆಗಳಲ್ಲಿ ತಲಾ 8 ಹಿಟಾಚಿ ಯಂತ್ರಗಳು ಹೂಳು ತೆರವು ಕಾರ್ಯದಲ್ಲಿ ತೊಡಗಿವೆ. ಹೂಳನ್ನು ಕೆರೆಗಳ ಸಮೀಪದಲ್ಲೇ ರಾಶಿ ಹಾಕಲಾಗಿದೆ.
ಈ ಹೂಳನ್ನು ವಿಲೇವಾರಿ ಮಾಡಲು ಮೈಲಸಂದ್ರ ಹಾಗೂ ವಿಟ್ಟಸಂದ್ರದಲ್ಲಿ ಒಟ್ಟು 17 ಎಕರೆ ವ್ಯಾಪ್ತಿಯ ಕಲ್ಲು ಕ್ವಾರಿಯ ಜಾಗವನ್ನು ಜಿಲ್ಲಾಡಳಿತ ಬಿಡಿಎಗೆ ಹಸ್ತಾಂತರಿಸಿದೆ. ಈ ಪ್ರದೇಶ ಕೆರೆಗಳಿಂದ 25 ಕಿ.ಮೀ ದೂರದಲ್ಲಿದೆ. ಹೂಳನ್ನು ಕ್ವಾರಿಯ ಜಾಗಕ್ಕೆ ಸಾಗಿಸುವುದು ಸವಾಲಿನ ಕೆಲಸವಾಗಿದ್ದು, ಬೆಳಗಿನ ಹೊತ್ತು ರಸ್ತೆಯಲ್ಲಿ ಹೂಳು ಸಾಗಿಸಿದರೆ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತದೆ. ಹಾಗಾಗಿ ರಾತ್ರಿ ವೇಳೆ ಮಾತ್ರ ಹೂಳು ಸಾಗಿಸಬೇಕಿದೆ.
ಇನ್ನು ಹೂಳು ಸಾಗಿಸುವ ಕಾರ್ಯ ಆರಂಭಿಸಿಲ್ಲ. ಹಸಿ ಹೂಳಿನ ತೂಕ ಹೆಚ್ಚು ಆಗಿದ್ದರಿಂದ ಒಣಗಿದ ಬಳಿಕ ಅದರ ಸಾಗಾಟಕ್ಕೆ ಕಡಿಮೆ ವೆಚ್ಚ ಆಗುತ್ತದೆ. ಹೂಳನ್ನು ತೂಕ ಮಾಡಿ ನಂತರ ಸಾಗಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ತೂಕ ಮಾಡುವ ಯಂತ್ರವನ್ನು ಕೆರೆಯ ಬಳಿ ಅಳವಡಿಸಿದ ನಂತರ ಹೂಳನ್ನು ಕ್ವಾರಿಗೆ ಸಾಗಿಸುವ ಕಾರ್ಯ ಆರಂಭಿಸಲಿದ್ದೇವೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಿದ್ದಾರೆ.
ಬೆಳ್ಳಂದೂರು ಮತ್ತು ವರ್ತೂರು ಈ ಎರಡೂ ಕೆರೆಗಳಲ್ಲಿ ಹೆಚ್ಚೂ ಕಡಿಮೆ 1 ಕೋಟಿ ಘನ ಮೀಟರ್ಗಳ ಹೂಳು ತೆರವುಗೊಳಿಸಬೇಕಿದೆ. ಒಂದು ಘನ ಅಡಿ ಹೂಳು ಕೆರೆಯಿಂದ ಮೇಲಕ್ಕೆತ್ತಿ ಕ್ವಾರಿಗೆ ತಲುಪಿಸಲು 255ರೂ. ವೆಚ್ಚವಾಗುತ್ತದೆ. ಕೆರೆ ಅಭಿವೃದ್ಧಿಗಿಂತಲೂ ಹೂಳು ತೆರವಿಗೆ ಹೆಚ್ಚು ಖರ್ಚಾಗುತ್ತದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.