ಬೆಂಗಳೂರು : ಇಂದು ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಕೆಎಸ್ಆರ್ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಸಾರಿಗೆ ಸುರಕ್ಷಾ ಸಂಚಾರಿಯಾದ ಐಸಿಯು ಮತ್ತು ಆಕ್ಸಿಜನ್ ಬಸ್ಗಳಿಗೆ ಚಾಲನೆ ನೀಡಿದರು.
ಈ ವಿಶೇಷ ಕರಾರಸಾ ನಿಗಮದ ಬಸ್ಸುಗಳಲ್ಲಿ ಇರುವ ಸೌಲಭ್ಯಗಳು
• ಐದು ಹಾಸಿಗೆಯುಳ್ಳ ಆ್ಯಂಬುಲೆನ್ಸ್
• ಪ್ರತಿ ಬೆಡ್ಗೂ ಆಕ್ಸಿಜನ್ ವ್ಯವಸ್ಥೆ
• ರೋಗಿಗಳ ಮಾನಿಟರ್ ( ಬಿಪಿ,ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ) ಐವಿ ವ್ಯವಸ್ಥೆ
• ವೆಂಟಿಲೇಟರ್ ಅಳವಡಿಸಲು ಸೌಲಭ್ಯ
• ತುರ್ತು ಔಷಧಿ ವ್ಯವಸ್ಥೆ
• ಜನರೇಟರ್ ವ್ಯವಸ್ಥೆ
ಬಸ್ಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಅಂದಾಜು ₹10 ಲಕ್ಷ ವೆಚ್ಚದಲ್ಲಿ ನಿಗಮದಲ್ಲಿಯೇ ಆಂತರಿಕವಾಗಿ ನಿರ್ಮಿಸಲಾಗಿದೆ. ನಿಗಮವೇ ಸಂಪೂರ್ಣ ವೆಚ್ಚವನ್ನು ಭರಿಸಿದೆ.
ಈಗಾಗಲೇ ನಮ್ಮ 4 ಸಾರಿಗೆ ನಿಗಮಗಳ ವತಿಯಿಂದ 12ಕ್ಕೂ ಹೆಚ್ಚು ಆಕ್ಸಿಜನ್ ಪೂರೈಕೆ ಬಸ್ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಎರಡು ಬಸ್ಗಳಿಗೆ ಆ್ಯಂಬುಲೆನ್ಸ್ ಮಾದರಿಯಲ್ಲಿ ಉಪಕರಣಗಳನ್ನು ಅಳವಡಿಸಲಾಗಿದೆ.
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಖಾಸಗಿ ಸಹಭಾಗತ್ವ ಒದಗಿ ಬಂದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ಆಕ್ಸಿಜನ್ ಬಸ್ಗಳನ್ನು ಒದಗಿಸಲು ನಮ್ಮ ಸಾರಿಗೆ ನಿಗಮಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಸ್ಥಳೀಯವಾಗಿ ಆಕ್ಸಿಜನ್ ಮತ್ತು ವೈದ್ಯಕೀಯ ಉಪಕರಣಗಳನ್ನು ನಿರ್ವಹಿಸಲು ಖಾಸಗಿ ಸಹಭಾಗಿತ್ವ ಅಥವಾ ಯಾವುದಾದರೂ ಆಸ್ಪತ್ರೆಗಳ ಸಹಭಾಗಿತ್ವ ಅಗತ್ಯವಾಗಿದೆ. ಸಾರಿಗೆ ನಿಗಮಗಳ ಈ ಎಲ್ಲಾ ಸೇವೆಗಳೂ ಸಂಪೂರ್ಣ ಉಚಿತವಾಗಿವೆ.
ಈಗಾಗಲೇ ಹೈದರಾಬಾದಿನ ಒಂದು ಸ್ವಯಂಸೇವಾ ಸಂಸ್ಥೆಯು ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬಸ್ಗಳಿಗೆ ಪ್ರಾಯೋಜಕತ್ವ ನೀಡಲು ಮುಂದೆ ಬಂದಿದೆ.
ಮಾನ್ಯ ಆರೋಗ್ಯ ಸಚಿವರಾದ ಸುಧಾಕರ್ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದ್ದು, ಇದು ಕೈಗೂಡಿದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಬಸ್ಗಳನ್ನು ಕರ್ನಾಟಕದಲ್ಲಿ ಒದಗಿಸಲು ನಮಗೆ ಸಾಧ್ಯವಾಗುತ್ತದೆ ಎಂದರು.
ಕೋವಿಡ್ ರೋಗಿಗಳು ಆಸ್ಪತ್ರೆಗಳಿಗೆ ಬಂದಾಗ ತಕ್ಷಣಕ್ಕೆ ಅವರಿಗೆ ವಿಶ್ರಮಿಸಿ ಆಕ್ಸಿಜನ್ ನೀಡಲು ಈ ಬಸ್ಸುಗಳು ಸಂಜೀವಿನಿಯಂತೆ ಉಪಕಾರಿಯಾಗಲಿವೆ. ಏಕೆಂದರೆ, ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಕುಳಿತುಕೊಳ್ಳುವುದಕ್ಕೂ ಸ್ಥಳ ಇರುವುದಿಲ್ಲ ಮತ್ತು ಆಕ್ಸಿಜನ್ ಲಭ್ಯವಿರುವುದಿಲ್ಲ. ಅಂತಹ ಸಮಯದಲ್ಲಿ ಈ ಆಕ್ಸಿಜನ್ ಬಸ್ಗಳು ಸಂಜೀವಿನಿಯಂತೆ ಜನರ ಪ್ರಾಣ ಉಳಿಸಲು ನೆರವಿಗೆ ಬರುತ್ತವೆ ಎಂದು ತಿಳಿಸಿದರು.
ಕೋವಿಡ್ ನಿಯಂತ್ರಣದ ಉದ್ದೇಶದಿಂದ ಸಾರಿಗೆ ನಿಗಮಗಳಿಗೆ ಬಸ್ಗಳನ್ನು ಒದಗಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಈ ಬಸ್ಗಳಲ್ಲಿ ಆಕ್ಸಿಜನ್ ಅಥವಾ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ನಿರ್ವಹಿಸಲು ಅನುಭವಿ ಅರೆ ವೈದ್ಯಕೀಯ ಸಿಬ್ಬಂದಿ ಅಗತ್ಯವಾಗಿದ್ದಾರೆ.
ಈ ಬಗ್ಗೆ ಯಾರೇ ಮುಂದೆ ಬಂದರೂ ಸಾರಿಗೆ ನಿಗಮಗಳು ಕೈಜೋಡಿಸಲು ಸಿದ್ಧವಿದೆ. ಯಾವುದೇ ಜಿಲ್ಲೆಗಳಲ್ಲಿ ಆಕ್ಸಿಜನ್ ಬಸ್ಗಳು ಅಗತ್ಯವಿದ್ದರೆ ಆಯಾ ಜಿಲ್ಲೆಗಳ ಸಾರಿಗೆ ನಿಗಮಗಳ ಅಧಿಕಾರಿಗಳನ್ನು ಸಂಪರ್ಕಿಬಹುದಾಗಿದೆ ಎಂದು ಹೇಳಿದರು.