ಬೆಂಗಳೂರು: ಅನರ್ಹ ಶಾಸಕರ ಪ್ರಕರಣ ಸಂಬಂಧ ನಾಳೆ ಸುಪ್ರೀಂಕೋರ್ಟ್ ತೀರ್ಪು ಯಾವ ರೀತಿ ಬರಲಿದೆ ಎನ್ನುವುದರ ಬಗ್ಗೆ ಸಿಎಂ ಬಿಎಸ್ವೈ ಗಮನಹರಿಸಿದ್ದು, ನಾಳೆ ಮಧ್ಯಾಹ್ನ 3 ಗಂಟೆವರೆಗೂ ಯಾವುದೇ ಕಾರ್ಯಕ್ರಮ ನಿಗದಿಪಡಿಸಿಕೊಂಡಿಲ್ಲ, ನಿಗದಿಯಾಗಿದ್ದ ಕಾರ್ಯಕ್ರಮವನ್ನೂ ರದ್ದುಪಡಿಸಿದ್ದಾರೆ.
ನಾಳೆ ಅನರ್ಹ ಶಾಸಕರ ಕೇಸ್ ಏನಾಗುತ್ತದೆಯೋ ಏನೋ ಎನ್ನುವ ಆತಂಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ಹೀಗಾಗಿ ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಕೋರ್ ಕಮಿಟಿ ಸಭೆ ಇದ್ದು ಅಲ್ಲಿಯವರೆಗೂ ಸಿಎಂ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಬೆಳಗ್ಗೆ ಅಶೋಕಾ ಹೋಟೆಲ್ನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಸಿಎಂ ಭಾಗಿಯಾಗಲು ಸಿದ್ದತೆ ಮಾಡಲಾಗಿತ್ತು, ಸಮಯವನ್ನೂ ನಿಗದಿಪಡಿಸಲಾಗಿತ್ತು. ಆದರೆ, ಇಂದು ಸಂಜೆ ದಿಢೀರ್ ಬದಲಾವಣೆ ಮಾಡಿ ಮಧ್ಯಾಹ್ನ 3 ಗಂಟೆವರೆಗೂ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಸಿಎಂ ನಿರ್ಧರಿಸಿದ್ದಾರೆ.
ಅನರ್ಹರ ಪ್ರಕರಣದ ನಂತರ ಪಕ್ಷದ ನಿರ್ಧಾರ ಕುರಿತು ಚರ್ಚಿಸಲು ನಾಳೆ ಮಧ್ಯಾಹ್ನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಭೆಯಲ್ಲಿ ಉಪ ಚುನಾವಣೆ ಅಭ್ಯರ್ಥಿಗಳು, ಅನರ್ಹರ ಮುಂದಿನ ಭವಿಷ್ಯದ ಕುರಿತು ಚರ್ಚೆ ನಡೆಯಲಿದೆ.