ಬೆಂಗಳೂರು: ಈತ ಫೀಲ್ಡಿಗಿಳಿದ್ರೆ ಸಾಕು. ಒಂದೋ ದೇವಸ್ಥಾನದ ಹುಂಡಿ ಕಳ್ಳತನ, ಇಲ್ಲವಾದರೆ ಬಸ್ನಲ್ಲಿ ಪ್ರಯಾಣಿಕರ ಚಿನ್ನಾಭರಣ ಎಗರಿಸುವುದು ಫಿಕ್ಸ್. ಕಳ್ಳತನದಲ್ಲಿ ಪಂಟರ್ ಆಗಿದ್ದ ಆರೋಪಿಯನ್ನು ಉಪ್ಪಾರ ಪೇಟೆ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಿದ್ದಿಕ್ ಅಲಿಯಾಸ್ ಕುಣಿಗಲ್ ಸಿದ್ದಿಕ್ ಬಂಧಿತ ಆರೋಪಿ. ದೇವಸ್ಥಾನಕ್ಕೆ ಭಕ್ತನಂತೆ ಬಂದು ಅಲ್ಲಿದ್ದ ಹುಂಡಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯನ್ನ ವಿಚಾರಣೆ ನಡೆಸಿದಾಗ ಈತ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಹಿಂಬಾಲಿಸಿ ಅವರ ಚಿನ್ನಾಭರಣ ಕದಿಯುತ್ತಿದ್ದ ವಿಚಾರ ಕೂಡ ಬಯಲಾಗಿದೆ. ಸದ್ಯ ಬಂಧಿತನಿಂದ 3 ಲಕ್ಷ 75 ಸಾವಿರ ಮೌಲ್ಯದ 77 ಗ್ರಾಂ. ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಬೀಗ ಹಾಕಿರುವ ಮನೆಗಳಿಗೆ ಕನ್ನ ಹಾಕುತ್ತಿದ್ದರ ಬಂಧನ: ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಗೋವಿಂದ ರಾಜನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್ ಖಾನ್ ಹಾಗೂ ಸಲ್ಮಾನ್ ಖಾನ್ ಬಂಧಿತ ಆರೋಪಿಗಳು.
ಗೋವಿಂದ ರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆ ತನಿಖೆಗಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಈ ಹಿಂದೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ 5 ಲಕ್ಷ ಮೌಲ್ಯದ 100 ಗ್ರಾಂ.ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಕಟರ್ ಬಳಸಿ ಎಟಿಎಂಯಲ್ಲಿದ್ದ 14 ಲಕ್ಷ ಲೂಟಿ