ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ವಕೀಲರು ಆಗಮಿಸದೇ ಇದ್ದುದರಿಂದ ವಿಚಾರಣೆಗೆ ನಿಗದಿಪಡಿಸಿದ್ದ ಪ್ರಕರಣಗಳನ್ನು ಮುಂದೂಡಲಾಯಿತು.
ಕೊರೊನಾ ವೈರಸ್ ತಡೆಗಟ್ಟಲು ಹೈಕೋರ್ಟ್ ಮತ್ತು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಏಪ್ರಿಲ್ 6ರವರೆಗೆ ರಜೆ ನೀಡಲಾಗಿದೆ. ಹಾಗಿದ್ದೂ ಹೈಕೋರ್ಟ್ನ ಮೂರು ಪೀಠಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆ ನಡೆಯಿತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಲು ಹಾಜರಾಗಬೇಕಿದ್ದ ವಕೀಲರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಕೋರ್ಟ್ಗೆ ಬಂದಿರಲಿಲ್ಲ. ಹೀಗಾಗಿ ವಕೀಲರು ಹಾಜರಿರದ ಪ್ರಕರಣಗಳನ್ನು ಖುದ್ದು ನ್ಯಾಯಮೂರ್ತಿಗಳೇ ಕಾಸ್ ಲಿಸ್ಟ್ ಹಿಡಿದು ನಂಬರ್ಗಳನ್ನು ಕೂಗಿ ವಿಚಾರಣೆ ಮುಂದೂಡಿದರು.
ಇದೇ ವೇಳೆ ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದು ಪ್ರಕರಣದ ವಿಚಾರಣೆ ನಡೆಸಿತು. ಸ್ಕೈಪ್ ಮೂಲಕ ಪ್ರಕರಣದ ವಿಚಾರಣೆಗೆ ಹಾಜರಾದ ವಕೀಲರೊಬ್ಬರು ವಿಡಿಯೋ ಕಾನ್ಫರೆನ್ಸ್ನಲ್ಲೇ ತಮ್ಮ ವಾದ ಮಂಡಿಸಿದರು.
ಇನ್ನು ಹೈಕೋರ್ಟ್ಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದ ವಕೀಲರು ಮತ್ತು ಕಕ್ಷೀದಾರರ ಸಂಖ್ಯೆ ಇಂದು ತುಂಬಾ ಕಡಿಮೆ ಇತ್ತು.