ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ತನ್ನ ತಾಯಿಯ ವೈದ್ಯಕೀಯ ನೆರವಿಗಾಗಿ ಬ್ಯಾಂಕ್ಗೆ ಹಣ ಹಾಕಲು ತೆರಳಿದ್ದವನಿಗೆ ಚಾಕು ತೋರಿಸಿ ದರೋಡೆ ಮಾಡಿರುವ ಘಟನೆ, ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪತ್ರಾಸ್ ಗುರಿಯಾ ಹಣ ಕಳೆದುಕೊಂಡ ಯುವಕ. ಅಸ್ಸಾಂನಲ್ಲಿರುವ ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿಯ ವೈದ್ಯಕೀಯ ಚಿಕಿತ್ಸೆಗೆ ತಗುಲುವ ಹಣ ಹೊಂದಿಸುತ್ತಿದ್ದ ಈತ ಹಲವು ತಿಂಗಳಿಂದ 27 ಸಾವಿರ ರೂ. ಕೂಡಿಟ್ಟಿದ್ದ. ಈ ಹಣವನ್ನು ಅ.17 ರಂದು ತಾಯಿಯ ಅಕೌಂಟ್ಗೆ ಹಾಕಲು ಬ್ಯಾಂಕ್ಗೆ ತೆರಳಿದ್ದ, ಇದೇ ವೇಳೆ ಯುವಕನ ಬಳಿ ಹಣ ಇರುವುದನ್ನು ಅರಿತ ದರೋಡೆಕೋರರು ಯುವಕನ ಬೈಕ್ ಅನ್ನು ಹಿಂಬಾಲಿಸಿ ಫೇಜರ್ ಟೌನ್ನ ಐಟಿಸಿ ಬಳಿ ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆ ಹೋಗಿ ನಡೆದ ವಿಷಯ ಹೇಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.