ಬೆಂಗಳೂರು : ಕರ್ನಾಟಕ ಸಂಘಟಿತ ಅಪರಾಧಗಳ ತಡೆ ಕಾಯಿದೆ (ಕೋಕಾ) ಪ್ರಕರಣದ ಅಪರಾಧಿಗಳ ಕುರಿತು ತನಿಖಾಧಿಕಾರಿಗಳು ಅನುಸರಿಸುವುದಕ್ಕಾಗಿ ಹೈಕೋರ್ಟ್ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಅಲ್ಲದೆ, ಇವುಗಳನ್ನು ಮುಂದಿನ ನಾಲ್ಕು ವಾರಗಳಲ್ಲಿ ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಬನ್ನಂಜೆ ರಾಜನ ವಿರುದ್ಧ ದಾಖಲಾಗಿರುವ ಕೋಕಾ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಇತರೆ ಕ್ರಿಮಿನಲ್ ಅಪರಾಧ ಪ್ರಕರಣಗಳ ವಿಚಾರಣೆಗೆ ತಡೆ ನೀಡಬೇಕು ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಬೆಳಗಾವಿಯ ಕೋಕಾ ವಿಶೇಷ ನ್ಯಾಯಾಲಯದ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿ ರದ್ದುಪಡಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿರಂದರಾಜು ಅವರಿದ್ದ ಪೀಠ, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಯಾವುದೇ ಆರೋಪಿ ನ್ಯಾಯಯುತ ಮತ್ತು ತ್ವರಿತ ವಿಚಾರಣೆ ಬಯಸುವುದು ಮೂಲಭೂತ ಹಕ್ಕು. ಇದು ಅರ್ಜಿದಾರರ ಎಲ್ಲ ಪ್ರಕರಣಗಳಿಗೂ ಅನ್ವಯವಾಗಲಿದೆ. ಹೀಗಾಗಿ ಒಂದು ಪ್ರಕರಣ ಬಾಕಿ ಇದೆ ಎಂದ ಮಾತ್ರಕ್ಕೆ ಇತರೆ ಪ್ರಕರಣಗಳ ವಿಚಾರಣೆಗೆ ತಡೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೇ, ಕೋಕಾ ಕಾಯಿದೆಯಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಗೆ ಹಲವು ಮಾರ್ಗ ಸೂಚಿಗಳನ್ನು ಹೊರಡಿಸಿದ್ದು, ಮುಂದಿನ ನಾಲ್ಕು ವಾರಗಳಲ್ಲಿ ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಾರ್ಗಸೂಚಿಗಳು ಹೀಗಿವೆ..
1. ಕೋಕಾ ಪ್ರಕರಣ ಎದುರಿಸುತ್ತಿರುವ ಆರೋಪಿಯ ವಿರುದ್ಧದ ಪ್ರಕರಣಗಳ ವಿಚಾರಣೆ ಪ್ರಾರಂಭವಾಗಿದಿಯೇ? ಎಷ್ಟು ಸಾಕ್ಷಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಆರೋಪಿಗಳ ಬಂಧನದ ವಿವರಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿರಬೇಕು.
2. ಪ್ರಕರಣ ವಿಚಾರಣೆಗೆ ವಿಡಿಯೋ ಕಾನ್ಪರೆನ್ಸ್ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ನ್ಯಾಯಾಲಯಗಳ ರಿಜಿಸ್ಟ್ರಾರ್ಗಳು ಕಂಪ್ಯೂಟರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಸರ್ಕಾರ ಆರ್ಥಿಕ ಸಹಕಾರ ನೀಡಬೇಕು.
3. ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್) ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಲು ಸಾಧ್ಯವಿಲ್ಲದಿದ್ದಲ್ಲಿ ಸರ್ಕಾರ ಅಗತ್ಯ ಆರ್ಥಿಕ ನೆರವನ್ನು ಒದಗಿಸಬೇಕು.
4. ಅಪರಾಧಿಗಳ ವಿವರಗಳನ್ನು ಎಲ್ಲ ನ್ಯಾಯಾಲಯಗಳಿಗೆ ಲಭ್ಯವಾಗುವಂಥ ಅಂತರಿಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಕಾರ್ಯಾರಂಭ ಮಾಡಬೇಕು.
5. ವಿಚಾರಣೆಗೆ ನಿಗದಿಪಡಿಸಿರುವ ದಿನಾಂಕಗಳು ತಿಳಿಸಬೇಕು. ಜತೆಗೆ, ದಿನಂಪ್ರತಿ ಪ್ರಕರಣದ ವಿಚಾರಣೆಗೆ ಆದ್ಯತೆ ನಿಡಬೇಕು.
6. ಆರೋಪಿಯ ವಿರುದ್ಧ ಕೋಕಾ ಆರೋಪದಲ್ಲಿ ದಾಖಲಾಗಿರುವ ಪ್ರಕರಣಗಳ ಪಟ್ಟಿಯುಳ್ಳ ಡ್ಯಾಶ್ ಬೋರ್ಡ್ ಸಿದ್ದಪಡಿಸಿರಬೇಕು. ಇದರಲ್ಲಿ ಅಪರಾಧಿಗಳ ಎಲ್ಲ ಪ್ರಕರಣಗಳ ವಿವರವನ್ನು ಉಲ್ಲೇಖಿಸಿರಬೇಕು. ಇದು ವಕೀಲರಿಗೆ ಲಭ್ಯವಾಗುವಂತಿರಬೇಕು.