ಬೆಂಗಳೂರು: ಜೂ.18 ರಂದು ‘ಮಾಸ್ಕ್ ದಿನ’ ಆಚರಿಸುವ ಮೂಲಕ ಜನ ಜಾಗೃತಿ ಮೂಡಿಸುವಂತೆ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದು ಕೋವಿಡ್-19 ಸೋಂಕು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮಾಸ್ಕ್ ಧರಿಸುವುದು, ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಪ್ರಮುಖವಾದ ವೈದ್ಯಕೀಯೇತರ ಪಾಲನೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಜನ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು ಜೂ.18 ರಂದು ‘ಮಾಸ್ಕ್ ದಿನ’ವನ್ನಾಗಿ ಘೋಷಿಸಲು ನಿರ್ಧರಿಸಿದೆ. ಈ ದಿನ ಜಿಲ್ಲಾ ಮತ್ತು ತಾಲ್ಲೂಕು ಆಡಳಿತವು ಚುನಾಯಿತ ಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳು, ವೈದ್ಯಕೀಯ ಸಿಬ್ಬಂದಿಗಳು ಪಾದಯಾತ್ರೆಯ ಮೂಲಕ ಜಾಗೃತಿ ಮೂಡಿಸಲು ತಿಳಿಸಿದೆ. ಪಾದಯಾತ್ರೆ ವೇಳೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳತಕ್ಕದ್ದು :
ಜಿಲ್ಲಾ / ತಾಲ್ಲೂಕು / ಕಾರ್ಪೋರೇಷನ್ | ಪಂಚಾಯಿತಿ / ಕಂದಾಯ ವ್ಯಾಪ್ತಿಯ ವಾರ್ಡ್ಗಳಲ್ಲಿ ಜಿಲ್ಲಾಡಳಿತ ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವಲ್ಲಿ ಜಾಗೃತಿ ಮೂಡಿಸುವುದು.
ಜನಜಾಗೃತಿ ಮೂಡಿಸುವ ಈ ಪಾದಯಾತ್ರೆಯನ್ನು ಕೈಗೊಳ್ಳತಕ್ಕದ್ದು, ಪಾದಯಾತ್ರೆಯಲ್ಲಿ 50 ಜನರಿಗೆ ಮೀರಿ ಒಂದು ನಿರ್ದಿಷ್ಟ ಪ್ರದೇಶಗಳಲ್ಲಿ ಭಾಗವಹಿಸಬಾರದು. ಪಾದಯಾತ್ರೆಯಲ್ಲಿ ಭಾಗವಹಿಸುವಂತಹವರು ಕಡ್ಡಾಯವಾಗಿ ಮಾಸ್ಕ್ನ್ನು ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳುವ ಮುಖೇನ ಸಮಾಜಕ್ಕೆ ಮಾದರಿಯಾಗುವುದು.
ಜನ ಜಾಗೃತಿ ಪಾದಯಾತ್ರೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ, ಆಗಿಂದಾಗ್ಗೆ ಸೋಪಿನಿಂದ ಕೈ ತೊಳೆಯುವಿಕೆ ಹಾಗೂ ಸ್ಯಾನಿಟೈಸರ್ ಬಳಸುವಿಕೆಯಿಂದ ಆಗುವ ಉಪಯುಕ್ತತೆಯ ಬಗ್ಗೆ ಜಾಗೃತಿ ಮೂಡಿಸುವುದು. ಪರಿಣಾಮಕಾರಿ ಸಂವಹನಕ್ಕಾಗಿ ಫಲಕಗಳನ್ನು ಬಳಸುವುದು.